Thursday, June 27, 2013

ಕಲಿಯಬೇಕಿರುವ ಪಾಠಗಳು..

ಕಲಿಯಬೇಕಿರುವ ಪಾಠಗಳು..

ಉತ್ತರಖಂಡದಲ್ಲುಂಟಾದ ಪ್ರಕೃತಿ ವಿಕೋಪ ಎಂತಹ ಗಟ್ಟಿ ಮನಸ್ಸಿನವರನ್ನೂ ನಡುಗಿಸಿಬಿಡುವಂತಹದ್ದು. ಉಕ್ಕಿಹರಿಯುತ್ತಿರುವ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ರಸ್ತೆ, ಸೇತುವೆಗಳು, ನೋಡನೋಡುತ್ತಿದ್ದಂತೆಯೇ ಕುಸಿದು ಬೀಳುತ್ತಿರುವ ಕಟ್ಟಡಗಳು, ನಿರಾಶ್ರಿತರಾಗಿರುವ ಅದೆಷ್ಟೋ ಸಾವಿರ ಜನರು. ತೀರ್ಥಯಾತ್ರೆಗೆಂದು ಬಂದವರು ಅಂತಿಮಯಾತ್ರೆಯನ್ನೇ ಮುಗಿಸಿದ್ದಕ್ಕಿಂತ ದುರದೃಷ್ಟಕರ ವಿಚಾರ ಇನ್ನೊಂದಿಲ್ಲ. ಪ್ರಕೃತಿಯ ಈ ಮುನಿಸಿಗೆ ಕಾರಣವಾದರು ಏನು..? ಇದು ಕೇವಲ ನೈಸರ್ಗಿಕ ಅವಘಡವೇ..? ಇದರಲ್ಲಿ ಮನುಷ್ಯನ ಪಾಲೆಷ್ಟು..? ಉತ್ತರದ ಹಿಂದಿರುವುದು ಪ್ರಕೃತಿಯ ಮೇಲೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯದ ಕಥೆ.

ಹಿಮಾಲಯದಲ್ಲಿ ಹುಟ್ಟುವ ನದಿಗಳು ಉಕ್ಕಿ ಹರಿದು ಪ್ರವಾಹ ಉಂಟಾಗುತ್ತಿರುವುದು ಇದೇ ಮೊದಲೇನಲ್ಲ. ಬಹುಷಃ ಇದೇ ಕೊನೆಯದೂ ಆಗಿರಲಾರದು. ಹಿಮಾಲಯದ ಆಳವಾದ ಕಮರಿಗಳನ್ನು ನೋಡಿದವರಿಗೆ ಅಲ್ಲಿ ಹುಟ್ಟುವ ನದಿಗಳು ಪ್ರವಾಹವನ್ನುಂಟು ಮಾಡಬಲ್ಲವು ಎಂಬುದನ್ನು ನಂಬುವುದು ಸ್ವಲ್ಪ ಕಷ್ಟವೇ. ಸೋಜಿಗವೆನಿಸಿದರೂ ಅಲ್ಲಿ ಕಾಲಾಂತರಗಳಿಂದ ಪ್ರವಾಹಗಳು ಜರುಗುತ್ತಲೇ ಇವೆ.ಈ ಮೊದಲು ಅಲ್ಲಲ್ಲಿ ಉಂಟಾಗುತ್ತಿದ್ದ ಭೂಕುಸಿತಗಳು ಹರಿಯುವ ನೀರನ್ನು ಅಡ್ಡಗಟ್ಟಿ ನೈಸರ್ಗಿಕವಾಗಿ ಆಣೆಕಟ್ಟೊಂದನ್ನು ನಿರ್ಮಿಸುತ್ತಿದ್ದವು. ಹರಿಯುವ ನದಿ ತಿರುವಿನಲ್ಲಿ ಉಂಟು ಮಾಡುತ್ತಿದ್ದ ಕೊರೆತ, ಗುಡ್ಡಗಳ ಇಳಿಜಾರೇ ಗಟ್ಟಿಯಾಗಿಲ್ಲದೇ ಇದ್ದದ್ದು, ಎಡಬಿಡದೆ ಸುರಿಯುತ್ತಿದ್ದ ಧಾರಾಕಾರ ಮಳೆ ಇವೇ ಮೊದಲಾದವುಗಳು ಭೂಕುಸಿತವನ್ನುಂಟುಮಾಡುತ್ತಿದ್ದವು. ನೀರಿನ ಒತ್ತಡ ಹೆಚ್ಚಿ ಈ ಆಣೆಕಟ್ಟುಗಳು ಒಡೆದು ಹೋದಾಗ ಪ್ರವಾಹ ಸಂಭವಿಸುತ್ತಿತ್ತು. ಹೀಗೆ ಉಂಟಾದ ಪ್ರವಾಹದಿಂದ ಹಲವು ನಗರಗಳು ಮುಳುಗಡೆಯಾಗಿವೆ, ಹಲವು ನದಿಗಳು ತಮ್ಮ ದಿಕ್ಕುಗಳನ್ನೆ ಬದಲಾಯಿಸಿವೆ. ಆದರೆ ಈಚೆಗೆ ಸಂಭವಿಸಿದ ಹಿಮಾಲಯ ಸುನಾಮಿ ಎಂದೇ ಬಣ್ಣಿಸಲಾಗುತ್ತಿರುವ ಉತ್ತರಖಂಡದಲ್ಲಿನ ದುರಂತ ಇಲ್ಲಿಯವರೆಗಿನ ದುರಂತಗಳಲ್ಲಿ ಅತ್ಯಂತ ಭೀಕರವಾದುದು. ಎದುರಿಗಿದ್ದ ಗುಡ್ಡ, ಕಟ್ಟಡ, ಸೇತುವೆ, ಜನ, ಜಾನುವಾರುಗಳು ಇವ್ಯಾವುದನ್ನೂ ಲೆಕ್ಕಿಸದೆ ಕಬಳಿಸಿ ರಭಸದಿಂದ ನುಗ್ಗುತ್ತಿದ್ದ ಗಂಗೆಯ ಆರ್ಭಟಕ್ಕೆ ಪರಶಿವನು ಸಂತ್ರಸ್ತ. ದೇವನದಿ ಗಂಗೆ ಭೂಮಿಗೆ ಇಳಿಯಲು ಭಗೀರಥನ ಪ್ರಯತ್ನ ಕಾರಣವಾದರೆ, ಈ ರೀತಿ ಉಕ್ಕಿಹರಿಯಲು ಮಾನವನ ಮಿತಿಯಿರದ ದುರಾಸೆಯೇ ಕಾರಣ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಿರಂತರವಾಗಿ ನಡೆಸಿಸ ದೌರ್ಜನ್ಯದ ಫಲವಿದು.

ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದಾಗಿ ನಮ್ಮ ಋತುಮಾನಗಳಲ್ಲಿ ಹಲವು ಬದಲಾವಣೆಗಳುಂಟಾಗಿವೆ. ವಿಪರೀತ ಚಳಿ, ದೀರ್ಘಕಾಲದ ಬೇಸಿಗೆ, ಒಮ್ಮೊಮ್ಮೆ ಅನಾವೃಷ್ಟಿ, ಮತ್ತೊಮ್ಮೆ ಅತಿವೃಷ್ಟಿ. ಬದಲಾದ ಹವಾಮಾನದಿಂದಾಗಿ ಮಳೆ ಬೀಳುವ ಕ್ರಮ ಕೂಡ ಬದಲಾಗಿದೆ. ವರ್ಷಪೂರ್ತಿ ಬೀಳಬೇಕಿದ್ದ ಮಳೆ ಕೇವಲ ಒಂದೆರಡು ದಿನಗಳಲ್ಲಿ ಸುರಿದು ಹೋಗುತ್ತಿದೆ. ಹೀಗೆ ಬಿದ್ದ ಮಳೆನೀರು ಭೂಮಿಯೊಳಗೆ ಇಂಗದೆ ಹರಿದುಹೋಗುತ್ತಿದೆ. ಭೂಮಿಗೆ ಹಸಿರು ಹೊದಿಕೆಗಳಿಲ್ಲದೆ ಇರುವುದರಿಂದ ಮೇಲ್ಮಣ್ಣು ಕೊಚ್ಚಿಕೊಂಡು ಹೋಗಿ ನದಿಯಲ್ಲಿ ಹೂಳು ತುಂಬಿಕೊಳ್ಳುವುದಲ್ಲದೆ ನದಿಗಳ ನೀರಿನ ಮಟ್ಟ ಹೆಚ್ಚಿ ಪ್ರವಾಹಗಳು ಉಂಟಾಗುತ್ತಿವೆ. ಮೊನ್ನೆ ಉತ್ತರಖಂಡದಲ್ಲಾದದ್ದು ಇದೇ. ಮೊದಲು ಮೇಘಸ್ಫೋಟದಿಂದ ಎಂದು ಹೇಳಲಾದ ಭಾರಿಮಳೆಯನ್ನು ಹಿಡಿದಿಟ್ಟುಕೊಳ್ಳಲಾಗದಿದ್ದುದರಿಂದ ಪ್ರವಾಹವುಂಟಾಯಿತು. ಅನೀರಿಕ್ಷಿತವಾಗಿ ಬರುವ, ಸ್ವಲ್ಪವೇ ಕಾಲ ಇರುವ ಆದರೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೀಳುವ ಮಳೆಗೆ ಮೇಘಸ್ಫೋಟ ಎನ್ನುತ್ತಾರೆ. ಸಾಮಾನ್ಯವಾಗಿ ಮುಂಗಾರಿನಲ್ಲಿ ದಿನವೊಂದಕ್ಕೆ ಭಾರತದ ಬಹುತೇಕ ಕಡೆ ಬೀಳುವ ಸರಾಸರಿ ಮಳೆ ೨೦ ಮಿಮೀ. ಆದರೆ ಜೂನ್ ೧೬ರಂದು ಉತ್ತರಖಂಡದಲ್ಲಿ ಸುರಿದದ್ದು ಬರೋಬ್ಬರಿ ೨೪೦ಮಿಮೀ. ಮಳೆ. ಆದರೆ ಅಲ್ಲಿನ ಹವಾಮಾನ ಇಲಾಖೆಯ ಪ್ರಕಾರ ಅಲ್ಲಿ ಮೇಘಸ್ಫೋಟವಾಗಿರಲಿಲ್ಲ. ಬದಲಿಗೆ ಬಿದ್ದ ಈ ಭಾರಿ ಮಳೆ ಪ್ರವಾಹವನ್ನುಂಟು ಮಾಡಿತು. ಮೊದಲೇ ಹೇಳಿದ ಹಾಗೆ ಹಿಮಾಲಯದಲ್ಲಿ ಹುಟ್ಟುವ ನದಿಗಳಿಗೆ ಪ್ರವಾಹ ಹೊಸತೇನಲ್ಲ. ಆದರೆ ಈ ಬಾರಿ ದುರಂತದ ತೀವ್ರತೆ ಕಂಡುಕೇಳರಿಯದ ರೀತಿಯಲ್ಲಿ ಹೆಚ್ಚಲು ಅಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆದಿರುವ ಅನಾಚಾರಗಳೇ ಕಾರಣ. 

ಬದಲಾಗುತ್ತಿರುವ ನದಿಪಾತ್ರಗಳು
ನದಿಪಾತ್ರಗಳಲ್ಲಿ ನಡೆಯುತ್ತಿರುವ ಹಲವು ಚಟುವಟಿಕೆಗಳು ನದಿಗಳ ಮೂಲಸ್ವರೂಪವನ್ನೇ ಬದಲಾಯಿಸಿಬಿಟ್ಟಿವೆ. ನದಿಯೊಂದಕ್ಕೆ ಪ್ರವಾಹ ಉಂಟಾದಾಗ ಹರಿಯುವ ಹೆಚ್ಚುವರಿ ನೀರನ್ನು ತಿರುಗಿಸಲು ಕಾಲುವೆಗಳಿರುತ್ತವೆ. ಇಂತಹ ಕಾಲುವೆಗಳಿರುವಲ್ಲಿ ಯಾವುದೇ ತರಹದ ಕೆಲಸಗಳು ನಡೆಯಕೂಡದು. ನದಿಗಳ ತಟಗಳಲ್ಲಿಯೇ ನಾಗರೀಕತೆ ಅರಳಿದರೂ ಇಂತಹ ಕಾಲುವೆಗಳಿದ್ದ ಕಡೆ ಮನೆ ಕಟ್ಟುವುದು ಅಥವಾ ಇನ್ನ್ಯಾವುದೇ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುತ್ತಿರಲಿಲ್ಲ. ಆದರೆ ಬದಲಾದ ಸನ್ನಿವೇಶಗಳಲ್ಲಿ ನಡೆದ ಕಾರ್ಯಚಟುವಟಿಕೆಗಳು ಇಂತಹ ಕಾಲುವೆಗಳನ್ನೆಲ್ಲಾ ನುಂಗಿ ಹಾಕಿವೆ. ಈಗ ನದಿಗಳ ದಡದಲ್ಲಿಯೂ ಎಗ್ಗಿಲ್ಲದೆ ನಿರ್ಮಾಣಕಾರ್ಯಗಳು ನಡೆಯುತ್ತಿವೆ. ಇಲ್ಲಿಯೇ ಜನವಸತಿ ಪ್ರದೇಶಗಳು ರೂಪುಗೊಳ್ಳುತ್ತಿವೆ. ಈಗ ನದಿ ಉಕ್ಕಿ ಪ್ರವಾಹವುಂಟಾದರೆ, ನದಿ ನೀರು ಇನ್ನೆಲ್ಲಿ ತಾನೆ ಹರಿದೀತು..?

ಜಲವಿದ್ಯುತ್ ಯೋಜನೆಗಳು
ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ ಹಾಗೂ ಉತ್ತರಖಂಡ ವಿದ್ಯುಚ್ಛಕ್ತಿ ನಿಗಮ ಗಂಗಾ ನದಿಯೊಂದರಿಂದಲೇ ೯೦೦೦ಮೆವ್ಯಾ ವಿದ್ಯುತ್ ಉತ್ಪಾದನೆಗೆ ಅಂದಾಜಿಸಿ ೭೦ ಜಲವಿದ್ಯುತ್ ಯೋಜನೆಗಳನ್ನು ಪ್ರಾರಂಭಿಸಲು ಯೋಜನೆ ಹಾಕಿದೆ. ಗಂಗಾ ಮತ್ತು ಅದರ ಉಪನದಿಗಳನ್ನು ಸುರಂಗ ಕೊರೆದು ತಿರುಗಿಸಿ ಅಥವಾ ಆಣೆಕಟ್ಟುಗಳನ್ನು ಕಟ್ಟುವ ಮೂಲಕ ವಿದ್ಯುತ್ ಉತ್ಪಾದನೆಗೆ ಯೋಜಿಸಲಾಗಿದೆ. ಇದರಿಂದಾಗಿ ಭಾಗೀರಥಿಯ ಶೇ ೮೦ರಷ್ಟು ಹಾಗೂ ಅಲಕಾನಂದ ನದಿಯ ಶೇ೬೫ರಷ್ಟು ನದಿಪಾತ್ರಗಳು ಧಕ್ಕೆಗೊಳಗಾಗಲಿವೆ. ಈ ರೀತಿ ಒಂದರಹಿಂದೆ ಒಂದು ವಿದ್ಯುತ್ ಘಟಕಗಳನ್ನು ನಿರ್ಮಿಸಿರುವುದರಿಂದ ನದಿಗಳ ಹೆಚ್ಚಿನ ಭಾಗ ನೀರಿಲ್ಲದೆ ಒಣಗಿ ಅಲ್ಲಿನ ವಿಶೇಷ ಎನಿಸುವಂತಹ ಜಲಚರಗಳು ನಾಶಗೊಳ್ಳುತ್ತಿವೆ. ಅಲ್ಲದೆ ಆಣೆಕಟ್ಟೆಯ ಹಿನ್ನೀರಿನಲ್ಲಿ ಸಹಸ್ರಾರು ಹೆಕ್ಟೇರ್ ಕಾಡು ಕೂಡ ಮುಳುಗಿ ಹೋಗಲಿದ್ದು ಹಿಮಾಲಯದ ಜೀವಸಂಕುಲಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡಲಿವೆ. ಅಲ್ಲದೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸುರಂಗಗಳನ್ನು ಕೊರೆಸುತ್ತಿರುವುದು, ಬ್ಯಾರೇಜ್‍ಗಳನ್ನು ನಿರ್ಮಿಸುತ್ತಿರುವುದು ಅಲ್ಲಿನ ಗುಡ್ಡಗಳನ್ನು ಅಸ್ಥಿರಗೊಳಿಸುತ್ತಿವೆ.ಈ ಜಲವಿದ್ಯುತ್ ಯೋಜನೆಗಳು ಈಗಾಗಲೇ ಸೂಕ್ಷ್ಮ ಪ್ರದೇಶ ಎನಿಸಿರುವ ಹಿಮಾಲಯವನ್ನು ಇನ್ನಷ್ಟು ಸೂಕ್ಷ್ಮಗೊಳಿಸಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವಂತೆ ಮಾಡಿವೆ.

ಪ್ರವಾಸೋದ್ಯಮ ಹಾಗೂ ರಸ್ತೆಗಳು
ಉತ್ತರಖಂಡ ಹಿಂದೂಗಳ ಪಾಲಿಗೆ ಪುಣ್ಯಕ್ಷೇತ್ರಗಳೆನಿಸಿರುವಂತಹ ಹಲವು ಕ್ಷೇತ್ರಗಳನ್ನು ಹೊಂದಿದೆ. ಚಾರ್‌ಧಾಮ್‍ಗಳಾದ ಗಂಗೋತ್ರಿ, ಯಮುನೋತ್ರಿ, ಬದ್ರಿನಾಥ, ಕೇದಾರನಾಥಗಳಲ್ಲದೆ ಹೄಷಿಕೇಷ, ರುದ್ರಪ್ರಯಾಗ, ಹರಿದ್ವಾರ, ಹೇಮ್‍ಕುಂಡ, ಗೌರಿಕುಂಡ, ರಾಮ್‍ಬನ್ ಮುಂತಾದ ಪುಣ್ಯಕ್ಷೇತ್ರಗಳು ಉತ್ತರಖಂಡದ್ದುದ್ದಕ್ಕೂ ಹಬ್ಬಿಕೊಂಡಿವೆ. ಅಲ್ಲಿಗೆ ತೆರಳುವ ಪ್ರವಾಸಿಗಳು ಎಲ್ಲಾ ಕ್ಷೇತ್ರಗಳನ್ನು ದರ್ಶನ ಮಾಡಿಯೇ ಹೋಗುತ್ತಾರೆ. ಪ್ರವಾಸೋದ್ಯಮಕ್ಕಿರುವ ಈ ವಿಫುಲ ಅವಕಾಶಗಳನ್ನು ಬಳಸಿಕೊಳ್ಳಲೆಂದೇ ಅಲ್ಲಿ ವಾಹನಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಿದೆ. ೨೦೦೫-೦೬ರ ಸಾಲಿನಲ್ಲಿ ಹೊಸದಾಗಿ ನೋಂದಣಿಗೊಂಡ ವಾಹನಗಳ ಸಂಖ್ಯೆ ೪೦೦೦ದಷ್ಟಿದ್ದರೆ ಕಳೆದ ೨೦೧೨-೧೩ರ ಸಾಲಿನಲ್ಲಿ ಹೊಸದಾಗಿ ೪೦೦೦೦ದಷ್ಟು ಹೊಸವಾಹನಗಳು ನೋಂದಣಿಯಾಗಿದ್ದವು. ಈ ರೀತಿಯಾಗಿ ರಸ್ತೆಗಳ ಮೇಲೆ ಹೆಚ್ಚುತ್ತಿರುವ ಒತ್ತಡದಿಂದ ಅಲ್ಲಿನ ಗುಡ್ಡಗಳು ಅಸ್ಥಿರಗೊಂಡು ಭೂಕುಸಿತಗಳುಂಟಾಗುತ್ತಿದೆ. ಪ್ರವಾಸೋದ್ಯಮದ ಬಾಗಿಲು ಹೆಚ್ಚೆಚ್ಚು ತೆರೆದಂತೆಲ್ಲಾ ಭೂಕುಸಿತಗಳು ಸಹ ಗಣನೀಯವಾಗಿ ಹಚ್ಚಿವೆ. ಇದರ ಜೊತೆಗೆ ರಸ್ತೆ ವಿಸ್ತರಣೆ, ಹೊಸರಸ್ತೆಗಳ ಹೆಸರಿನಲ್ಲಿ ಗುಡ್ಡಗಳನ್ನು ಕೊರೆಯುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿವೆ. ಹೊರಗಿನಿಂದ ಬರುವ ಕಾಂಟ್ರ್ಯಾಕ್ಟರ್‌ಗಳಿಗೆ ಗುಡ್ಡಗಳ ರಚನೆಗಳ ಕುರಿತು ಅರಿವಿರುವುದಿಲ್ಲ. ಹೆಚ್ಚಿನ ಬಾರಿ ಹಣ ಉಳಿಸಲು ತಮಗಿಷ್ಟವಾದ ಕಡೆ, ತಮಗಿಷ್ಟ ಬಂದ ಹಾಗೆ ಗುಡ್ಡಗಳನ್ನು ಕಡಿದು ರಸ್ತೆ ಮಾಡುತ್ತಾರೆ.ಈ ರಸ್ತೆಗಳೇ ಪದೇಪದೇ ಭೂಕುಸಿತದ ತೊಂದರೆಕ್ಕೊಳಗಾಗಿ, ಕಾಂಟ್ರ್ಯಾಕ್ಟರ್‌ಗಳು ರಸ್ತೆಯನ್ನು ದುರಸ್ತಿ ಮಾಡುವುದರಲ್ಲೇ ಜೀವನ ಕಳೆಯುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ ಹಿಮಾಲಯದ ಶ್ರೇಣಿಗಳಲ್ಲಿ ಯಾವುದೇ ಪೂರ್ವಯೋಜನೆಯಿಲ್ಲದೆ ಕೈಗೊಳ್ಳುತ್ತಿರುವ ಅಭಿವೃದ್ಧಿ ಕೆಲಸಗಳೇ ಅಲ್ಲಿನ ಜನರ ಪಾಲಿಗೆ, ಹಿಮಾಲಯದ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ಹೀಗೆನ್ನುವುದಾದರೆ ನಮಗೆ ಸಂಪರ್ಕ ಸಾಧಿಸಲು ರಸ್ತೆಗಳು ಬೇಡವೇ..? ಜಲವಿದ್ಯುತ್ ಯೋಜನೆಗಳಿಲ್ಲದೆ ನಾವು ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವುದಾದರು ಹೇಗೆ..? ಉತ್ತರ ಸುಲಭ. ಸಾರಿಗೆ ವ್ಯವಸ್ಥೆಗಾಗಿ ನಮಗೆ ರಸ್ತೆಗಳು ಬೇಕೆ ಬೇಕು. ಆದರೆ ರಸ್ತೆಗಳ ನಿರ್ಮಾಣ ಹಿಮಾಲಯದ ಪರ್ವತ ಶ್ರೇಣಿಗಳನ್ನು ಅಸ್ಥಿರಗೊಳಿಸಬಾರದು. ಈ ಮೊದಲೇ ಭೂಕುಸಿತವುಂಟಾದ ಜಾಗದಲ್ಲಿ ಹೊಸರಸ್ತೆಗಳನ್ನು ನಿರ್ಮಿಸುವುದು ಹಿಮಾಲಯಗಳ ಮಟ್ಟಿಗೆ ಒಳ್ಳೆಯ ಮಾರ್ಗ. ರಸ್ತೆಗಳಿಗೆ ಸಮಾನಾಂತರವಾಗಿ ನೀರನ್ನು ಕೆಳಕ್ಕೆ ತಳ್ಳಲು ಸೂಕ್ತವಾದ ಚರಂಡಿವ್ಯವಸ್ಥೆಯು ಇರಬೇಕು. ಇದು ಭೂಕುಸಿತಗಳನ್ನು ತಕ್ಕಮಟ್ಟಿಗೆ ತಡೆಯಬಲ್ಲದು. ಅಪಾರಸಾಧ್ಯತೆಗಳಿರುವ ನವೀಕರಿಸಬಲ್ಲ ಇಂಧನಮೂಲಗಳತ್ತ ದೃಷ್ಟಿಹರಿಸಬೇಕಿರುವುದು ಈ ಕ್ಷಣದ ಅಗತ್ಯ. ವಿಕೇಂದ್ರಿಕೃತ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪ್ರಸರಣೆಯಲ್ಲಿನ ಸೋರಿಕೆಯನ್ನು ಕಡಿಮೆಗೊಳಿಸಬಹುದು. ಇದರಿಂದಾಗಿ ನಷ್ಟ ಕಡಿಮೆಯಾಗಿ ವಿದ್ಯುತ್ ಸ್ವಾವಲಂಬಿಯಾಗಬಹುದು. ಹಲವಾರು ದುಷ್ಪರಿಣಾಮಗಳುಳ್ಳ ಜಲವಿದ್ಯುತ್ ಯೋಜನೆಗಳಿಗಿಂತಲೂ ಇವು ಸಾವಿರ ಪಾಲು ಉತ್ತಮ.

ಈಗಾಗಲೇ ನಾವು ದಾರಿ ತಪ್ಪಿದ್ದೇವೆ. ನಾವು ದಾರಿ ತಪ್ಪಿದಾಗಲೆಲ್ಲಾ ಪ್ರಕೃತಿ ಇಂತಹ ಅವಘಡಗಳ ಮೂಲಕ ಪಾಠ ಕಲಿಸಿ ಸರಿದಾರಿಯಲ್ಲಿ ನಡೆಯುವಂತೆ ದಾರಿ ತೋರುತ್ತಾಳೆ. ಈಗಲಾದರೂ ಎಚ್ಚೆತ್ತುಕೊಂಡು ಸಾಗಬೇಕಿರುವುದು ನಮ್ಮ ಕರ್ತವ್ಯ. ಈಗಲೂ ಹಳೆಯ ದಾರಿಯಲ್ಲಿ ಮುಂದವರೆದರೆ ಪ್ರಕೃತಿ ಕಲಿಸಲಿರುವ ಮುಂದಿನ ಪಾಠಗಳಿಗೆ ತಯಾರಾಗಿರಬೇಕಿರುತ್ತದೆ. 

ವಿಷಯ ಸಂಗ್ರಹ: http://www.downtoearth.org.in/

Thursday, June 6, 2013

ಮರ್ಯಾದೆ ಪ್ರಶ್ನೆ

      ಅವಳದು ಒಲವಿನ ಮದುವೆ. ಅವಳು ತಾನು ಪ್ರೀತಿಸಿದ ಹುಡುಗನೊಂದಿಗೆ ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮದುವೆಯಾಗಿದ್ದಳು. ಅದು ಅವಳ ಆಸೆಯೂ ಆಗಿತ್ತು. ಜಾತಿ, ಧರ್ಮ, ಮತ, ಸಂಪ್ರದಾಯಗಳನ್ನು ಧಿಕ್ಕರಿಸಿ ತಾನು ನಂಬಿರುವ ಆದರ್ಶಗಳ ಪರ ನಿಲ್ಲುವುದು ಅವಳಿಗೆ ಎಲ್ಲಿಲ್ಲದ ಖುಷಿಯನ್ನು ತಂದುಕೊಡುತ್ತಿತ್ತು. ಆದ್ದರಿಂದಲೇ ಮನೆಯವರ ವಿರೋಧವನ್ನೂ ಲೆಕ್ಕಿಸದೆ, ಅವರ ಯಾವ ಬೆದರಿಕೆಗಳಿಗೂ ಜಗ್ಗದೆ, ಸಮಾಜಕ್ಕೂ ಹೆದರದೆ ತಾನಂದುಕೊಂಡಿದ್ದನ್ನು ಸಾಧಿಸಿದ್ದಳು. ಜಾತಿ ನೋಡದೆ, ಘಳಿಗೆಗಳ ಲೆಕ್ಕಾಚಾರವಿಲ್ಲದೆ, ಅಂತಸ್ತಿನ ಪ್ರದರ್ಶನವಿಲ್ಲದೆ, ಕಿವಿಗಡಚಿಕ್ಕುವ ಗಟ್ಟಿಮೇಳಗಳಿಲ್ಲದೆ, ಅರ್ಥಹೀನ ಸಂಪ್ರದಾಯಗಳಿಲ್ಲದೆ ಸರಳಾತಿಸರಳವಾಗಿ ಒಂದಷ್ಟು ಮಿತ್ರರ ಸಮ್ಮುಖದಲ್ಲಿ ಮದುವೆಯಾದದ್ದು ಅವಳ ಖುಷಿಯನ್ನು ಇಮ್ಮಡಿಗೊಳಿಸಿತ್ತು. ತನ್ನ ಮನೆಯವರನ್ನು ಕರೆದಿದ್ದಳಾದರೂ ಅವರು ಅವಳ ಮೇಲಿನ ಕೋಪದಿಂದ ಬಂದಿರಲಿಲ್ಲ. ಅವರ ಅನುಪಸ್ಥಿತಿ ಅವಳನ್ನು ತುಸು ಬೇಸರಗೊಳಿಸಿತಾದರೂ ತಾನು ಯಾವುದೇ ತಪ್ಪು ಮಾಡಿಲ್ಲವೆಂದು ಅನಿಸಿದ್ದರಿಂದ, ಮುಂದೊಂದು ದಿನ ತನ್ನನ್ನು ಅರ್ಥಮಾಡಿಕೊಳ್ಳುವರೆಂಬ ನಂಬಿಕೆಯಿಂದ ಬೇಸರವನ್ನು ಹೊರತೋರದೆ ನಗುನಗುತ್ತಿದ್ದಳು.

ಮದುವೆಯಾದ ಮರುದಿನ ತನ್ನವನೊಂದಿಗೆ ಮನೆಗೆ ಹೋದ ಅವಳನ್ನು ಸ್ವಾಗತಿಸಿದ್ದು ಮೂದಲಿಕೆಯ ಚುಚ್ಚುಮಾತುಗಳು, ತಿರಸ್ಕಾರದ ನೋಟಗಳು. ಇವುಗಳನ್ನೆಲ್ಲಾ ಮೊದಲೇ ನಿರೀಕ್ಷಿಸಿದ್ದ ಅವಳಿಗೆ ಬೇಸರವೆನಿಸಲಿಲ್ಲ. ಆದರೆ ಅವಳ ತಾಯಿ  "ನಮ್ಮ ಮನೆಯ ಮಾನ, ಮರ್ಯಾದೆ ಕಳೆದುಬಿಟ್ಟೆಯಲ್ಲಾ, ಈಗ ಎಲ್ಲರೆದುರು ತಲೆಯೆತ್ತಿ ಹೇಗೆ ನಡೆಯಲಿ..?" ಎಂದಾಗ ಮಾತ್ರ ಅವಳಿಗೆ ತಡೆದುಕೊಳ್ಳಲಾಗಲಿಲ್ಲ. "ಅಂಥದ್ದೇನೂ ಮಾಡಿದ್ದೀನಿ ನಿನ್ನ ಮಾನ ಕಳೆಯೋ ಅಂತಹದ್ದು" ಎಂದು ಅವಳು ಕೇಳಿಯೇ  ಬಿಟ್ಟಳು. "ಈಗ ಮಾಡಿರುವುದೇ ಸಾಕು ಇನ್ನೇನು ಮಾಡಬೇಕೆಂದುಕೊಂಡಿದ್ದೀಯಾ ಮಹರಾಯಿತಿ..?" ಎಂದು ಅವರ ತಾಯಿ ಬಾಗಿಲು ಮುಚ್ಚಿಯೇ ಬಿಟ್ಟರು. ಅವಳು ಅಳುತ್ತಾ ಹೊರಟು ಬಂದಳು.

ಅಂದಿನಿಂದ ಅವಳಿಗೆ ಕಾಡುತ್ತಿರುವ ಪ್ರಶ್ನೆ ತನ್ನ ಮನೆಯವರ ಮರ್ಯಾದೆ ಕಳೆಯುವಂತಹ ಕೆಲಸ ತಾನೇನು ಮಾಡಿದೆ ಎನ್ನುವುದು. ಜಾತಿ ಮೀರಿ ಪ್ರೀತಿಸಿದ್ದು ತನ್ನ ತಪ್ಪೇ..? ಪ್ರೀತಿಸಿದವನನ್ನು ಮದುವೆಯಾದದ್ದು ತನ್ನ ತಪ್ಪೇ..? ನೀತಿನಿಯಮಗಳನ್ನು ಮುರಿದು ಸಂಪ್ರದಾಯವನ್ನು ಮೀರಿದ್ದು ತನ್ನ ತಪ್ಪೇ..? ಅಷ್ಟಕ್ಕೂ ತಾನೇನು ಕದ್ದುಮುಚ್ಚಿ ಮದುವೆಯಾಗಿಲ್ಲವಲ್ಲ. ಅವರ ತಮ್ಮನನ್ನು ನನಗೆ ಗಂಟುಹಾಕಬೇಕೆಂಬ ಮಾತು ಬಂದಾಗ ನಾನು ಇಂತಹವನನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗುವುದಾದರೆ ಇವನನ್ನೇ ಮದುವೆಯಾಗುವುದು ಎಂದು ಪ್ರೀತಿಸಿದ ಹುಡುಗನನ್ನು ಮನೆಗೆ ಕರೆದೊಯ್ದು ಪರಿಚಯಿಸಿದ್ದೆನಲ್ಲ. ಅವರಿಗೂ ನಾನು ಈ ಹುಡುಗನ ಜೊತೆ ಚೆನ್ನಾಗಿ ಬದುಕಬಲ್ಲೆ ಎಂದೆನಿಸಿತ್ತಲ್ಲವಾ. ಹಾಗಿದ್ದರೆ ಈ ವಿರೋಧಕ್ಕೆ ಕಾರಣವೇನು..? ನೆಂಟರ ಮಾತುಗಳಿಗೆ ಹೆದರಿದರೆ..? ಸಮಾಜದ ತಿರಸ್ಕಾರದ ಭಯವೇ..? ಅವರ ಮನದಲ್ಲಿರುವುದಾದರೂ ಏನು..? ಊಹೂಂ.. ಮನ ಗೊಂದಲದ ಗೂಡಾಯಿತೇ ವಿನಃ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆಯಲಿಲ್ಲ. ಮನ ನಿಧಾನವಾಗಿ ಹಳೆಯ ನೆನಪೊಂದಕ್ಕೆ ಜಾರಿತು. 

ಆಗ ಇವಳಿನ್ನೂ ಕಾಲೇಜು ಮೆಟ್ಟಿಲೇರುತ್ತಿದ್ದಳು. ನಿಧಾನವಾಗಿ ಹೊರಜಗತ್ತಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿದ್ದಳು. ಮದುವೆ ವಯಸ್ಸಿಗೆ ಬಂದಿದ್ದ ಅವಳ ಆಣ್ಣನಿಗೆ (ದೊಡ್ಡಪ್ಪನ ಮಗ) ಮದುವೆ ಮಾಡಬೇಕೆಂದು ಮನೆಯಲ್ಲಿ ನಿಶ್ಚಯಿಸಿ ಹೆಣ್ಣು ಹುಡುಕುತ್ತಿದ್ದರು. ಸಂಪ್ರದಾಯಸ್ಥ ಮನೆಯವರಾದ ಇವರು ಸಾಂಪ್ರದಾಯಿಕ ರೀತಿಯಲ್ಲಿಯೇ ತಮ್ಮ ಮಗನ ಮದುವೆಯನ್ನು ಮಾಡಬೇಕೆಂದುಕೊಂಡಿದ್ದರು. ಮಗ ಸರ್ಕಾರಿ ನೌಕರನಾಗಿದ್ದರಿಂದ ಹೆಚ್ಚಿನ ನಿರೀಕ್ಷೆಯಲ್ಲಿಯೇ ಇದ್ದರು. ಒಂದಷ್ಟು ಹೆಣ್ಣುಗಳನ್ನು ನೋಡಿದರೂ ಜಾತಕ ಕೂಡಿಬರಲಿಲ್ಲ. ಜಾತಕ ಕೂಡಿ ಬಂದರೂ ಹುಡುಗಿ ಚೆನ್ನಾಗಿರಲಿಲ್ಲ ಎಂದು ಕೆಲವರನ್ನು ಇವರೇ ನಿರ್ಲಕ್ಷಿಸಿದ್ದರು. ಅಂತೂ ಇಂತೂ ನೋಡಲು ಲಕ್ಷಣವಾಗಿರುವ ಹುಡುಗಿಯೊಡನೆ ಜಾತಕ ಕೂಡಿಬಂದಿತು. ಆಮೇಲೆ ನಡೆದದ್ದು ಅಕ್ಷರಶಃ ದನದ ವ್ಯಾಪಾರ. ನಮ್ಮ ಹುಡುಗ ಸರ್ಕಾರಿ ನೌಕರ. ತಿಂಗಳಿಗೆ ಇಷ್ಟು ಸಾವಿರ ಸಂಬಳ. ಜೊತೆಗೊಂದಿಷ್ಟು ಎಕರೆ ಜಮೀನು. ನಮಗೆ ಒಂದೈದು ಲಕ್ಷ ನಗದು. ಹುಡುಗನಿಗೆ ಇನ್ನೂರು ಗ್ರಾಮ್ ಬಂಗಾರ, ಒಂದು ಬೈಕ್, ಕೇಳಿದ ಛತ್ರದಲ್ಲಿ ಮದುವೆ. ಇದು ಇವರ ಬೇಡಿಕೆ. ನೀವು ಕೇಳಿದ ರೀತಿಯಲ್ಲಿ ಮದುವೆ ಮಾಡಿಕೊಡ್ತೀವಿ, ಆದರೆ ಎರಡು ಲಕ್ಷ ನಗದು. ನೂರು ಗ್ರಾಮ್ ಬಂಗಾರ ಅಷ್ಟೇ ನಮ್ಮ ಕೈಯಲ್ಲಿ ಕೊಡಲಿಕ್ಕೆ ಆಗುವುದು  ಅಂತ ಹೆಣ್ಣಿನ ಕಡೆಯವರು. ಇಲ್ಲಿಂದ ಶುರು ಹಗ್ಗಜಗ್ಗಾಟ. ಕೊಡಬಹುದು ಕೊಡಿ ಸಾರ್ ಅಂತ ಇವರು, ಇಲ್ಲ ತುಂಬಾ ಜಾಸ್ತಿ ಆಯ್ತು ಅಂತ ಅವರು. ಕೊನೆಗೂ ಮೂರು ಲಕ್ಷ ನಗದು, ಹುಡುಗನಿಗೆ ನೂರು ಗ್ರಾಮ್ ಹುಡುಗಿಗೆ ನೂರು ಗ್ರಾಮ್ ಬಂಗಾರ, ಹೇಳಿದ ಛತ್ರದಲ್ಲಿ ಮದುವೆ.  ಮಗನಿಗೆಂದೇ ಕೇಳಿದ್ದ ಇನ್ನೂರು ಗ್ರಾಮ್ ಬಂಗಾರ ಈಗ ಸೊಸೆಯ ಮೂಲಕ ಬರುತ್ತಿದೆ ಎಂದು ಇವರು, ಹುಡುಗನಿಗೆ ಕೊಡಬೇಕಾಗಿತ್ತು ಈಗ ಮಗಳ ಮೈಮೇಲೆ ಇರುತ್ತದಲ್ಲ ಎಂದು ಅವರು. ಎರಡೂ ಕಡೆಯವರು ಒಪ್ಪಿಕೊಂಡರು. ಈ ಮದುವೆ ಮಾತುಕತೆ ನಡೆದದ್ದು ಇವಳ ಮನೆಯಲ್ಲಿಯೇ. ಅಣ್ಣ ತನ್ನನ್ನು ತಾನು ಮಾರಿಕೊಳ್ಳುತ್ತಿದ್ದಾನೆ ಎಂದೆನಿಸಿತು ಇವಳಿಗೆ. ಮದುವೆಯ ದಿನದ ಹುಚ್ಚಾಟಗಳನ್ನು ನೆನೆಸಿಕೊಳ್ಳದಿರುವುದೇ ಒಳ್ಳೆಯದೆನಿಸಿ ಮತ್ತೆ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತ ಕುಳಿತಳು.

ತನ್ನ ಅಣ್ಣ ಮಾಡಿದ್ದು ತಪ್ಪಲ್ಲವೇ..? ತನ್ನ ಮನೆಯವರು ಮಾಡಿದ್ದು ತಪ್ಪಲ್ಲವೇ..? ಅಣ್ಣನಿಗೆ ತನ್ನ ಹೆಂಡತಿಯನ್ನು ಸಾಕಲಾಗುವುದಿಲ್ಲವೇ..? ಅಷ್ಟಕ್ಕೂ ಅತ್ತಿಗೆ ದುಡಿಯಲು ಹೋಗುವುದಕ್ಕೆ ಬೇಡ ಎನ್ನಲು ಇವನಿಗೇನು ಹಕ್ಕಿದೆ..? ಇವರೆಲ್ಲರ ಅಗತ್ಯಗಳನ್ನು ಪೂರೈಸುವುದಲ್ಲದೇ ಇವರಿಗೆ ದುಡ್ಡು ಬೇರೆ ಕೊಡಬೇಕೆ..? ವರೋಪಚಾರದ ಹೆಸರಿನಲ್ಲಿ ಅಣ್ಣ ತನ್ನನ್ನು ತಾನು ಮಾರಿಕೊಂಡಿದ್ದು, ಅಣ್ಣನನ್ನು ಸಂತೆಯಲ್ಲಿ ಹರಾಜಿಗಿಟ್ಟವರಂತೆ ಇವರು ಮಾರಿದ್ದು ಮರ್ಯಾದೆಯ ಕೆಲಸವೇ..? ಅವನ ಕಾಲುತೊಳೆದು ಮಗಳನ್ನು ಧಾರೆ ಎರೆದುಕೊಡುವುದು ಮಹಾ ಘನಂದಾರಿಯ ಕೆಲಸವೇ..? ಇದಕ್ಕೆಲ್ಲಾ ಸಂಪ್ರದಾಯದ ಅಧಿಕೃತ ಮುದ್ರೆ ಒತ್ತಿರುವ ಸಮಾಜದ್ದು ತಪ್ಪೇ ಅಲ್ಲವೇ..? ಮತ್ತೆ ಮತ್ತೆ ಕೇಳಿಕೊಳ್ಳಲಾರಂಭಿಸಿದಳು. ಮನ ಹಗುರಾಯಿತು. ತನ್ನ ಮೊದಲಿನ ಪ್ರಶ್ನೆಗಳಿಗೆ ಪ್ರಶ್ನೆಗಳ ಮೂಲಕವೇ ಉತ್ತರ ಕಂಡುಕೊಂಡಳು. ಬೆತ್ತಲೆ ಜನರ ನಡುವೆ ಬಟ್ಟೆ ತೊಟ್ಟರೆ ಮನ್ನಣೆಯಿಲ್ಲ ಎನ್ನುವುದು ಅರಿವಾಯಿತು.

ಯಾವುದೇ ಆಡಂಬರವಿಲ್ಲದೇ, ಹುಸಿ ಆದರಗಳಿಲ್ಲದೇ ತಾನು ನಂಬಿಕೊಂಡು ಬಂದ ಆದರ್ಶಗಳ ಪರವಾಗಿ ನಿಂತು ತಾನಂದುಕೊಂಡಂತೆಯೇ ಸರಳವಾಗಿ ಮದುವೆಯಾಗಿದ್ದರ ಬಗ್ಗೆ, ಈ ಎಲ್ಲಾ ಸಂದರ್ಭಗಳಲ್ಲಿಯೂ ಜೊತೆಗೂಡಿದ ತನ್ನವನ ಬಗ್ಗೆ ಹೆಮ್ಮೆಯುಂಟಾಯಿತು. ಅವಳ ತಾಯಿ ಹುಟ್ಟುಹಾಕಿದ್ದ ಮರ್ಯಾದೆಯ ಪ್ರಶ್ನೆಗೆ ಉತ್ತರ ದೊರಕಿತ್ತು. ಈಗ ಅವಳನ್ನು ಕಾಡುತ್ತಿರುವ ಪ್ರಶ್ನೆ ತನ್ನ ತಾಯಿ ಮತ್ತು ಸಮಾಜಕ್ಕೆ ಹೇಗೆ ಇವುಗಳನ್ನೆಲ್ಲಾ ವಿವರಿಸಲಿ ಎಂಬುದು..? ತಮ್ಮ ನಂಬಿಕೆಗಳು ತಪ್ಪು ಎಂಬುದನ್ನು ಹೇಗೆ ಅವರಿಗೆ ಮನವರಿಕೆ ಮಾಡಿಕೊಡುವುದು ಎಂದು..? ಕಾಲವೇ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಬಹುದೇನೋ.

ಚಿತ್ರಕೃಪೆ : ಅವಧಿ

Thursday, May 2, 2013


ದಾರಿ ಯಾವುದಯ್ಯಾ ಅಭಿವೃದ್ಧಿಗೆ..?


ಕರ್ನಾಟಕದ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿ ಸುಮಾರು ಒಂದೂವರೆ ತಿಂಗಳು ಕಳೆದಿದೆ. ಹೈಕಮಾಂಡ್ ಮುಂದೆ ಹಲ್ಲುಗಿಂಜಿ ಜಾತಿ ಅಥವಾ ಹಣಬಲದಿಂದ ಟಿಕೆಟ್ ಪಡೆದು, ಸಿಗದೆ ಹೋದರೆ ಇನ್ನೊಂದು ಪಕ್ಷಕ್ಕೆ ಜಿಗಿದು ಅಲ್ಲಿಂದ ಟಿಕೆಟ್ ಗಿಟ್ಟಿಸಿ ನಾಮಪತ್ರ ಸಲ್ಲಿಸಿ, ಈಗಾಗಲೇ ಒಂದು ಸುತ್ತಿನ ಪ್ರಚಾರವನ್ನು ಮುಗಿಸಿದ್ದಾರೆ, ನಮ್ಮನ್ನಾಳುವ ಕನಸು ಹೊತ್ತಿರುವ ರಾಜಕಾರಣಿಗಳು. ಅವರೆಲ್ಲರ ಗುರಿ ಒಂದೇ, ಹೇಗಾದರು ಸರಿ ಗೆದ್ದು ವಿಧಾನಸೌಧ ಪ್ರವೇಶಿಸಿ ಸಾಧ್ಯವಾದ ಮಟ್ಟಿಗೆ ಬಾಚಿಕೊಳ್ಳುವುದು.

ಆಡಳಿತ ಪಕ್ಷ ಮತ್ತು ವಿಪಕ್ಷಗಳ ಪ್ರಚಾರಕಾರ್ಯಗಳಲ್ಲಿ ಸಮಾನವಾಗಿ ಆದರೆ ಬೇರೆ ಬೇರೆ ಹಿನ್ನೆಲೆಯಲ್ಲಿ ಕೇಳಿಬರುತ್ತಿರುವ ಶಬ್ದ "ಅಭಿವೃದ್ಧಿ". ನಮ್ಮ ಆಡಳಿತಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ ಎಂದು ಆಡಳಿತ ಪಕ್ಷದವರು ಹೇಳಿದರೆ ಇವರ ಕಾಲದಲ್ಲಾದದ್ದು ಕೇವಲ ಸ್ವಂತದ ಅಭಿವೃದ್ಧಿಯೆಂಬುದು ವಿಪಕ್ಷಗಳ ಕೂಗು. ಇನ್ನು ಕೇಂದ್ರದಿಂದ, ಬೇರೆ ರಾಜ್ಯಗಳಿಂದ ಬಂದವರು ಕೂಡ ಅಭಿವೃದ್ಧಿಯ ಮಂತ್ರ ಜಪಿಸಿದವರೇ. ಹಾಗಾದರೆ ಕರ್ನಾಟಕದಲ್ಲಾಗಿರುವ ಅಭಿವೃದ್ಧಿ ಯಾವ ಸ್ವರೂಪದ್ದು? ನಿಜವಾದ ಅಭಿವೃದ್ಧಿಯ ಮಾನದಂಡಗಳೇನು? ನಾವು ಸಾಗಬೇಕಿರುವ ಅಭಿವೃದ್ಧಿಯ ಪಥ ಯಾವುದು?

ಸರಾಸರಿ ವರಮಾನ ಏರಿಕೆ, ಕೃಷಿ ಮತ್ತು ಕೈಗಾರಿಕೆಗಳ ಉತ್ಪಾದನೆಯಲ್ಲಿ ಉನ್ನತಮಟ್ಟ ಸಾಧಿಸುವುದು, ಬದಲಾಗುತ್ತಿರುವ ವಿಙ್ಞಾನ ತಂತ್ರಙ್ಞಾನವನ್ನು ಅಳವಡಿಸಿಕೊಳ್ಳುವುದು, ಉದ್ಯೋಗಗಳು ಅಧಿಕವಾಗುವುದು, ಸಮಾಜ ಆಧುನೀಕರಣಗೊಳ್ಳುವುದು, ೪-೮ ಲೇನಿನ ರಸ್ತೆಗಳು ನಿರ್ಮಾಣಗೊಳ್ಳುವುದು, ದಾಖಲೆ ಗಾತ್ರದ ಬಜೆಟ್ ಮಂಡಿಸುವುದು.. ಇವಿಷ್ಟೇ ಅಭಿವೃದ್ಧಿಯ ಮಾನದಂಡಗಳಲ್ಲ. ಏಕೆಂದರೆ ಸರಾಸರಿ ವರಮಾನ ಏರಿಕೆಯಾಗುತ್ತಿದ್ದರೂ ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಬೆಳೆಯುತ್ತಿದೆ. ಉತ್ಪಾದನೆಯಲ್ಲಿ ಉನ್ನತ ಮಟ್ಟ ಸಾಧಿಸಲು ಕೈಗಾರಿಕೆಗಳು ಹಿಡಿದಿರುವ ದಾರಿ ಪರಿಸರದ ದೃಷ್ಟಿಯಿಂದ ಮಾರಕ. ೪-೮ ಲೇನಿನ ರಸ್ತೆಗಳು ಹಾದುಹೋಗಿರುವುದು ಸಾವಿರಾರು ರೈತರ ಸಮಾಧಿಯ ಮೇಲೆ. ಯೋಜನಾವೆಚ್ಚಗಳಿಗಿಂತ ಯೋಜನೇತರ ವೆಚ್ಚಗಳೇ ಜಾಸ್ತಿ ಇರುವ ದಾಖಲೆ ಗಾತ್ರದ ಬಜೆಟ್‍ನಿಂದ ಯಾವ ಉಪಯೋಗವೂ ಇಲ್ಲ. ಈಗಲೂ ಬಡತನ, ಹಸಿವು, ಅನಕ್ಷರತೆ, ಅಸಮಾನತೆ, ಮಾನವ ಹಕ್ಕುಗಳ ಉಲ್ಲಂಘನೆ ಜನರನ್ನು ಕಾಡುತ್ತಲೆ ಇದೆ. ಪರಿಸರದ ದೃಷ್ಟಿಯಿಂದ ಅಭಿವೃದ್ಧಿಯನ್ನು ಪರಿಭಾವಿಸಿಕೊಂಡರೆ ಕಣ್ಣೆದುರು ಅಭಿವೃದ್ಧಿಯ ನಾನಾ ವಿಕೃತ ಮುಖಗಳು ನರ್ತನ ಮಾಡುತ್ತವೆ. ಸರಕು, ಸಾಮಾಗ್ರಿ, ವರಮಾನ, ಉದ್ಯೋಗ, ತಂತ್ರಙ್ಞಾನ,ಬಂಡವಾಳ ಮುಂತಾದವು ಅಭಿವೃದ್ಧಿಯ ಸಾಧನಗಳೇ ಹೊರತು ಅವುಗಳ ವರ್ಧನೆಯೇ ಅಭಿವೃದ್ಧಿಯಲ್ಲ. ಇಲ್ಲಿ ದುಡಿಮೆಗಾರರ ಬದುಕು, ಅವರ ಬವಣೆ, ಅವರ ಬೆವರು, ಅವರ ಹಕ್ಕುದಾರಿಕೆ ಮುಂತಾದ ಸಂಗತಿಗಳಿಂದ ಅಭಿವೃದ್ಧಿಯನ್ನು ಅಳೆಯುತ್ತಿಲ್ಲ. ಅಭಿವೃದ್ಧಿ ಜನರನ್ನು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಒಳಗೊಳ್ಳುವ ಪ್ರಕ್ರಿಯೆಯಾಗಬೇಕು.ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದನ್ನು ವಿವರಿಸುವ ಒಂದೆರಡು ಉದಾಹರಣೆಗಳು ಇಲ್ಲಿವೆ.
ಮಹಿಳಾ ಅಭಿವೃದ್ಧಿ ಯೋಜನೆಗಳು:
"ಎಲ್ಲಿ ನಾರಿಯರು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ" ಎಂದು ನಂಬಿಕೊಂಡು ಬಂದ ದೇಶ ನಮ್ಮದು. ಆದರೆ ಇತಿಹಾಸವನ್ನು ಗಮನಿಸಿದರೆ ಎಲ್ಲ ವರ್ಗಗಳಲ್ಲಿಯೂ ಅತಿ ಹೆಚ್ಚು ಶೋಷಿತರಾದವರು ಮಹಿಳೆಯರೇ. ಅವರ ಬದುಕನ್ನು ಹಸನಾಗಿಸಲು ಹಾಕಿಕೊಂಡ ಯೋಜನೆಗಳು ಕಡಿಮೆಯೇನಲ್ಲ. ಆದರೆ ಅವುದಳು ಮಹಿಳೆಯರನ್ನು ಹೇಗೆ ಪರಿಭಾವಿಸಿಕೊಂಡಿದೆ ಎಂಬುದು ಮುಖ್ಯವಾಗುತ್ತದೆ. ಮಹಿಳಾ ಅಭಿವೃದ್ಧಿ ಯೋಜನೆಗಳು ಎರಡು ಬಗೆಯದ್ದು. ಮಹಿಳೆಯರ ದೈನಂದಿನ ಅಗತ್ಯಗಳನ್ನು ಪೂರೈಸುವ ಕಾರ್ಯಕ್ರಮಗಳು ಒಂದು ಬಗೆಯದ್ದಾದರೆ ಮಹಿಳೆಯರ ಸಂಘರ್ಷಣಾತ್ಮಕ ಅಗತ್ಯಗಳನ್ನು ಪೂರೈಸುವ ಕಾರ್ಯಕ್ರಮಗಳು ಇನ್ನೊಂದು ಬಗೆಯದ್ದು. ಬಾಲಕಿಯರಿಗೆ ಸೈಕಲ್ಲು, ಭಾಗ್ಯಲಕ್ಷ್ಮಿ, ಜನನಿ, ಮಡಿಲು ಮುಂತಾದ ಕಾರ್ಯಕ್ರಮಗಳು ಮೊದಲ ಬಗೆಯದ್ದು. ಇವುಗಳನ್ನು ಆಚರಣೆಗೆ ತರಲು ಸಮಾಜ ಅಥವಾ ಕುಟುಂಬ ವ್ಯವಸ್ಥೆಗಳಲ್ಲಿ ಯಾವುದೇ ಬದಲಾವಣೆ ತರಬೇಕಾಗಿಲ್ಲ. ಆಸ್ತಿಯಲ್ಲಿ ಹಕ್ಕು, ಕೌಟುಂಬಿಕ ದುಡಿಮೆಯನ್ನು ಪುರುಷ ಸದಸ್ಯರು ಹಂಚಿಕೊಳ್ಳುವುದು, ಲಿಂಗಸಂಬಂಧಿ ಶ್ರಮವಿಭಜನೆಯನ್ನು ತಿರಸ್ಕರಿಸುವುದು, ಅವರಂದಕೊಂಡಂತಾಗಲು ಅಗತ್ಯವಾದ ಅವಕಾಶಗಳನ್ನು, ಸಾಮರ್ಥ್ಯವನ್ನು ಒದಗಿಸುವುದು, ವ್ಯಕ್ತಿಯಾಗಿ ನೋಡುವುದು, ದೈಹಿಕ ಸಮಗ್ರತೆ ಮತ್ತು ಸಂತಾನೋತ್ಪತ್ತಿಯ ಹಕ್ಕು ಇವೇ ಮೊದಲಾದವುಗಳು ಮಹಿಳೆಯರ ಸಂಘರ್ಷಣಾತ್ಮಕ ಅಗತ್ಯಗಳನ್ನು ಪೂರೈಸುತ್ತವೆ. ಇವುಗಳನ್ನು ಆಚರಣೆಗೆ ತರಲು ಸಮಾಜ ಅಥವಾ ಕುಟುಂಬ ವ್ಯವಸ್ಥೆಗಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಬೇಕಾಗುತ್ತದೆ. ಮೊದಲನೆಯ ರೀತಿಯ ಕಾರ್ಯಕ್ರಮಗಳು ಮಹಿಳೆಯರ ಬದುಕನ್ನು ಸಹ್ಯಗೊಳಿಸಬಹುದೇ ಹೊರತು ಸಮೃದ್ಧಗೊಳಿಸುವುದಿಲ್ಲ. ಮಹಿಳೆಯರು ಸ್ವತಂತ್ರ ವ್ಯಕ್ತಿಗಳಾಗಿ ತಮ್ಮ ಬದುಕನ್ನು ತಾವು ಪರಿಭಾವಿಸಿಕೊಂಡಂತೆ ರೂಪಿಸಿಕೊಳ್ಳಲು, ಕಟ್ಟಿಕೊಳ್ಳಲು ಅಗತ್ಯವಾದ ಸ್ವಾತಂತ್ರ್ಯ ಮತ್ತು ಸಾಮರ್ಥ್ಯಗಳಾನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ.

ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ:
ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಪರಿಸರದ ಮೇಲೆ ನಡೆಸಿರುವ ಘೋರ ಅತ್ಯಾಚಾರದ ಪರಿಣಾಮವನ್ನು ನಾವು ಈಗಾಗಲೇ ಅನುಭವಿಸುತ್ತಿದ್ದೇವೆ. ಕೆಟ್ಟ ಮೇಲೂ ಸಹ ನಮಗೆ ಇನ್ನೂ ಬುದ್ಧಿ ಬಂದಿಲ್ಲ. ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮವೆನಿಸಿರುವ ಅನೇಕ ಯೋಜನೆಗಳನ್ನು ಜಾರಿಗೆ ತರಲು ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುದಿಗಾಲಲ್ಲಿ ನಿಂತಿವೆ. ತೀರ ಇತ್ತೀಚೆಗೆ ದ.ಕ ಜಿಲ್ಲೆಯ ಮಂಗಳೂರ ತಾಲ್ಲೂಕಿನ ನಿಡ್ಡೋಡಿಯಲ್ಲಿ ದೇಶದಲ್ಲಿಯೇ ಅತಿದೊಡ್ಡದೆನಿಸಿರುವ ೪೦೦೦ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಸದ್ದಿಲ್ಲದೆ ಸಿದ್ಧತೆಗಳನ್ನು ನಮ್ಮ ಸರ್ಕಾರಗಳು ನಡೆಸಿವೆ. ಪಶ್ಚಿಮಘಟ್ಟಕ್ಕೆ ತೀರ ಸಮೀಪವಿರುವ ನಿಡ್ಡೋಡಿಯಲ್ಲಿ ಈ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ಸ್ಥಾಪನೆಯಾದರೆ ಪಶ್ಚಿಮಘಟ್ಟದ ಮೂಲಸೆಲೆಗೆ ಕೊಡಲಿಯೇಟು ಬೀಳುವುದು ಖಂಡಿತ. ಯೋಜನಾ ಪ್ರದೇಶದ ಹತ್ತಾರು ಮೈಲು ಸುತ್ತಳತೆಯಲ್ಲಿ ಕೃಷಿ, ಹೈನುಗಾರಿಕೆ, ತೋಟಗಾರಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಳ್ಳುತ್ತವೆ. ಅದೇ ರೀತಿಯಲ್ಲಿ ಪಶ್ಚಿಮಘಟ್ಟದ ಕಾಡುಗಳನ್ನು ನುಂಗಿಹಾಕುವ ಗುಂಡ್ಯ ಜಲವಿದ್ಯುತ್ ಯೋಜನೆಗೆ ಮರುಜೀವ ಬರುವ ಸಾಧ್ಯತೆಗಳಿವೆ. ಗಾಡ್ಗೀಳ್ ಸಮಿತಿ ಕೆಂಪು ನಿಶಾನೆ ತೋರಿದ್ದ ಈ ಯೋಜನೆಗೆ ಕಸ್ತೂರಿ ರಂಗನ್ ನೇತೃತ್ವದ ಉನ್ನತ ಸಮಿತಿ ಹೊಸದಾರಿಯನ್ನು ತೋರಿಸಿದೆ. ತೀರಾ ಹಳೆಕಾಲದ, ಅದಕ್ಷ, ಕಳಪೆ, ಅಪಾಯಕಾರಿ ಹಾಗೂ ದುಬಾರಿ ಎನಿಸಿರುವ ಈ ವಿಧಾನಗಳು ಮುಂದಿನ ಪೀಳಿಗೆಗೆ ಹೆಚ್ಚಿನ ಹೊರೆಯನ್ನು ಹೇರುತ್ತವೆ. ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಹೊಸಹೊಸ ಅವಕಾಶಗಳು ತೆರೆದುಕೊಳ್ಳುತ್ತಿರುವ ಈ ತಂತ್ರಙ್ಞಾನ ಯುಗದಲ್ಲಿ ಈಗಲೂ ನೂರಾರು ವರ್ಷಗಳ ಕಾಲದ ಹಳೆಯ ವಿಧಾನವನ್ನೇ ಬಳಸುತ್ತಿರುವುದು ಮೂರ್ಖತನವಲ್ಲದೇ ಮತ್ತಿನ್ನೇನು..? ದಂಡಿಯಾಗಿ ಬೀಳುವ ಸೌರಶಕ್ತಿಯನ್ನು, ಬೀಸುವ ಗಾಳಿಯನ್ನು, ಜೈವಿಕ ದ್ರವ್ಯಗಳನ್ನು, ಕೃಷಿತ್ಯಾಜ್ಯಗಳನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡಬಹುದು. ಹೀಗೆ ಕೌಟುಂಬಿಕ ಮಟ್ಟದಲ್ಲಿ ವಿಕೇಂದ್ರಿಕೃತ ವಿಧಾನಗಳಿಂದ ಊರಲ್ಲಿ, ಮನೆಮನೆಗಳಲ್ಲಿ ವಿದ್ಯುತ್ ಉತ್ಪಾದಿಸಿ ತಮ್ಮ ಬೇಡಿಕೆಗಳನ್ನು ಪೂರೈಸಿಕೊಂಡು ಉಳಿದಿದ್ದನ್ನು ಗ್ರಿಡ್‍ಗೆ ಸೇರಿಸಬಹುದು. ಈ ರೀತಿಯ ತಂತ್ರಙ್ಞಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾದರೆ ಚೈತನ್ಯ ಕಳೆದುಕೊಂಡು ನಲುಗಿ ಹೋಗಿರುವ ಗ್ರಾಮೀಣ ಜನತೆಯ ಮೊಗದಲ್ಲಿ ತುಸು ನಗುವಾದರೂ ಕಾಣಬಹುದು. ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವ ಅವಶ್ಯಕತೆಯಿದೆ.

ಶಿಕ್ಷಣ ವ್ಯವಸ್ಥೆ ಮತ್ತು ಭಾಷಾ ಮಾಧ್ಯಮ:
ನಾಡಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ಅಲ್ಲಿನ ಶಿಕ್ಷಣ ವ್ಯವಸ್ಥೆ. ದೇಶದ ಭವಿಷ್ಯವೆನಿಸಿಕೊಂಡಿರುವ ಮಕ್ಕಳಿಗೆ ಬದುಕಲು ಅಗತ್ಯವಾದ ಕೌಶಲ್ಯಗಳನ್ನು ಕಲಿಸಿ ಜವಾಬ್ದಾರಿಯುಳ್ಳ ನಾಗರೀಕರನ್ನಾಗಿ ರೂಪಿಸುವುದೇ ಶಿಕ್ಷಣ ವ್ಯವಸ್ಥೆ. ಅದರ ಅಂಗಗಳು ಮೂಲಭೂತ ಸೌಲಭ್ಯಗಳು ಮತ್ತು ಶೈಕ್ಷಣಿಕ ವಿಚಾರಗಳು. ನಮ್ಮ ಸರ್ಕಾರ ನಡೆಸುವ ಶಾಲೆಗಳಲ್ಲಿ ಸರಿಯಾದ ಕಟ್ಟಡಗಳಿಲ್ಲ, ಶೌಚಾಲಯಗಳಿಲ್ಲ, ಗ್ರಂಥಾಲಯಗಳಿಲ್ಲ, ಆಟದ ಮೈದಾನಗಳಿಲ್ಲ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರಿಲ್ಲ, ಕೊನೆಗೆ ಅಲ್ಲಿ ವಿದ್ಯಾರ್ಥಿಗಳೇ ಇಲ್ಲ. ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಿದ್ದ ಸರ್ಕಾರವೇ ಮುಂದೆ ನಿಂತು ವಿಲೀನದ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಈಗಾಗಲೇ ಜನರಿಗೆ ಆವರಿಸಿರುವ ಇಂಗ್ಲೀಷ್ ಭೂತವು ನಮ್ಮ ನಾಯಕರಿಗೂ ಆವರಿಸಿಬಿಟ್ಟಿದೆ. ಅದಕ್ಕಾಗಿಯೇ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಎನಿಸಿಕೊಂಡಿರುವ ಜೆಡಿಎಸ್ ಕೂಡ ತನ್ನ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಪ್ರಸ್ತಾಪಿಸಿದೆ. ಬಿಜೆಪಿ ಸಹ ಹಿಂದೆ ಇದೇ ಅಂಶವನ್ನು ಪ್ರಸ್ತಾಪಿಸಿತ್ತು. ಮಾತೃಭಾಷೆಯಲ್ಲಿನ ಕಲಿಕೆ ಅತ್ಯುತ್ತಮ ಎಂಬುದನ್ನು ಜಗತ್ತಿನ ಎಲ್ಲಾ ತಙ್ಞರು ಸಾರುತ್ತಾ ಬಂದಿದ್ದಾರೆ. ಯುನೆಸ್ಕೋ ಸಹ ಈ ವಿಷಯವನ್ನು ಒಪ್ಪಿಕೊಂಡಿದೆ. ನಮ್ಮ ಮುಂದಿರುವ ಸವಾಲು ಏನೆಂದರೆ ಮಾತೃಭಾಷೆಯಲ್ಲಿ ಜಗತ್ತಿನಲ್ಲಿಯೇ ಅತ್ಯುತ್ತಮ ಎನಿಸುವಂತಹ ಶಿಕ್ಷಣವ್ಯವಸ್ಥೆಯನ್ನು ರೂಪಿಸಿ, ಜನರಿಗೆ ಮಾತೃಭಾಷಾ ಶಿಕ್ಷಣದ ಪ್ರಯೋಜನಗಳನ್ನು ಮನದಟ್ಟು ಮಾಡಿಸಿ ಆ ಮೂಲಕ ನಾಡಿನ ಅಭಿವೃದ್ಧಿಗೆ ಭದ್ರ ತಳಪಾಯ ಹಾಕಬೇಕು. ಏಕೆಂದರೆ ದೇಶದ ಭವಿಷ್ಯದ ಬೀಜ ಮೊಳಕೆಯೊಡೆಯುವುದು ನಮ್ಮ ಶಿಕ್ಷಣವ್ಯವಸ್ಥೆಯಲ್ಲಿಯೇ. ನಾವು ಬಿತ್ತಿದನ್ನೇ ನಾವು ಪಡೆಯುತ್ತೇವೆ.

ಮೇಲಿನ ಅಭಿವೃದ್ಧಿಯ ಮಾದರಿಗಳು ನಮ್ಮ ನಾಯಕರ ಮುಂದಿದ್ದರೂ ಅವರಿಗೆ ಅದು ಬೇಕಾಗಿಲ್ಲ. ಅವರ ಅಭಿವೃದ್ಧಿಯ ಮಾದರಿಗಳೇ ಬೇರೆ. ಅವರಿಗೆ ಬೋರ್‍ವೆಲ್ ಕೊರೆಸುವುದರಲ್ಲಿ ಇರುವ ಆಸಕ್ತಿ ಇಂಗುಗುಂಡಿ ತೋಡಿಸಿ ಅಂತರ್ಜಲ ಹೆಚ್ಚಿಸುವುದರಲ್ಲಿ, ನೆಲಕ್ಕೆ ಬಿದ್ದ ಒಂದೊಂದು ಹನಿಯನ್ನು ಕೊಯ್ಲು ಮಾಡಿ ಉಪಯೋಗಿಸುವುದರಲ್ಲಿ ಇಲ್ಲ. ಇವರದೇನಿದ್ದರೂ ನದಿಗಳನ್ನೇ ತಿರುಗಿಸಿ ನೀರು ಹರಿಸುವ ಬಣ್ಣದ ಯೋಜನೆಗಳು. ಕೆರೆ ಕಟ್ಟಬೇಕಿರುವ ಇವರೇ ಕೆರೆಗಳನ್ನು ಒತ್ತುವರಿ ಮಾಡುತ್ತಾರೆ. ದೇವಸ್ಥಾನದ ನೆಪವೊಡ್ಡಿ ಬೆಟ್ಟದ ಮೇಲಿನವರೆಗೂ ರಸ್ತೆ ಮಾಡಿಸುತ್ತಾರೆ. ಅಲ್ಲಿನ ಮಳೆಗೆ ರಸ್ತೆ ಕಿತ್ತು ಬರುತ್ತಲೂ ಹೊಸದಾಗಿ ರಸ್ತೆ ಹಾಕಿಸುತ್ತಾರೆ. ಇದರ ನಡುವೆ ಕಡಿದು ಹಾಕಿದ ಕಾಡು ಇವರಿಗೆ ಲೆಕ್ಕವೇ ಅಲ್ಲ. ಗಣಿಗಾರಿಕೆಯಿಂದ ಕಳೆದುಕೊಂಡ ಅಮೂಲ್ಯ ನೈಸರ್ಗಿಕ ಸಂಪತ್ತು ಇವರಿಗೆ ಏನೂ ಅಲ್ಲ. ಕೈಗಾರಿಕೆಗಳಿಗೆ ಫಲವತ್ತಾದ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುನ ಸರ್ಕಾರವೇ ಕೃಷಿಬಜೆಟನ್ನು ಮಂಡಿಸುತ್ತದೆ. ಇವೇ ಮೊದಲಾದವುಗಳು ಅಭಿವೃದ್ಧಿಯ ಹೆಸರಿನಲ್ಲಿ ನಡೆದುಕೊಂಡು ಬಂದಿರುವ ವೈರುಧ್ಯಗಳು.

ಸದ್ಯಕ್ಕೆ ನಮ್ಮ ಮುಂದಿರುವುದು ಎರಡು ದಾರಿಗಳು. ಅನೂಚಾನವಾಗಿ ನಡೆದುಕೊಂಡು ಬಂದಿರುವ ಈ ಅಭಿವೃದ್ಧಿಯ ಮಾದರಿಯನ್ನು ಒಪ್ಪಿಕೊಂಡು ನಡೆದು ನಮಗೆ ನಾವೇ ಗುಂಡಿಯನ್ನು ತೋಡಿಕೊಳ್ಳುವುದು ಅಥವಾ ಎಲ್ಲರನ್ನೂ ಒಳಗೊಳ್ಳುವ ಸುಸ್ಥಿರ, ಪರಿಸರ ಪರ ಅಭಿವೃದ್ಧಿಯ ಪಥದಲ್ಲಿ ನಡೆಸಬಲ್ಲ ನಾಯಕರನ್ನು ಆರಿಸುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆಯ ಮೂಲಕ ಎಲ್ಲ ವರ್ಗದ ಜನರಿಗೂ ತಮ್ಮ ಜನಪ್ರತಿನಿಧಿಗಳನ್ನು ಆರಿಸಿಕೊಳ್ಳುವ ಹಕ್ಕನ್ನು ನೀಡಲಾಗಿದೆ. ಈ ಸದವಕಾಶ ಒದಗಿ ಬರುವುದು ೫ ವರ್ಷಗಳಿಗೊಮ್ಮೆ. ಇದೀಗ ಮೇ ೫ರಂದು ಕರ್ನಾಟಕದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ನಮ್ಮ ದೇಶ ಬದಲಾಗುವುದಿಲ್ಲ ಎಂಬ ಸಿನಿಕತನ ಬಿಟ್ಟು ಬದಲಾವಣೆಯ ಮೊದಲ ಹೆಜ್ಜೆಯಾಗಿ ನಮ್ಮ ನಾಡನ್ನು ನೈಜ ಅಭಿವೃದ್ಧಿಯ ಪಥದಲ್ಲಿ ಸಾಗಿಸಬಲ್ಲ ಶಕ್ತಿಯುಳ್ಳವರಿಗೆ ಮತ ನೀಡೋಣ. ಎಷ್ಟೇ ದೂರದ ಪಯಣವೂ ಸಹ ಶುರುವಾಗುವುದು ಸಣ್ಣ ಹೆಜ್ಜೆಯಿಂದಲೇ.



ಆಕರಸೂಚಿ:
"ಧರೆ ಹತ್ತಿ ಉರಿದರೆ" - ಡಾ. ಟಿ. ಆರ್. ಚಂದ್ರಶೇಖರ
"ಅಭಿವೃದ್ಧಿಯ ಅಂಧಯುಗ" - ನಾಗೇಶ ಹೆಗೆಡೆ

ಚಿತ್ರ: ಅಂತರ್ಜಾಲ.

Thursday, April 4, 2013


ನನ್ನ ಮೊದಲ ಚಾರಣ

ಪೂರ್ಣಚಂದ್ರ ತೇಜಸ್ವಿಯವರ ಬದುಕು, ಬರಹ, ಚಿಂತನೆಗಳ ಸಾಕಾರಕ್ಕಾಗಿ ರೂಪುಗೊಂಡ ವಿಸ್ಮಯ ಪ್ರತಿಷ್ಠಾನ ಹಲವು ಚಟುವಟಿಕೆಗಳ ಮೂಲಕ ತೇಜಸ್ವಿಯವರ ನೆನಪನ್ನು ಹಸಿರಾಗಿರಿಸಲು ಪ್ರಯತ್ನಿಸುತ್ತಿದೆ. ಅದರ ಕಾರ್ಯಚಟುವಟಿಕೆಗಳ ಭಾಗವಾಗಿ ಮಾರ್ಚ್ ೨೯ರ ಶುಕ್ರವಾರದಂದು ಮೂಡಿಗೆರೆ ಸಮೀಪದ ಕುಂದೂರಿನ ಬೇಟರಾಯನಕೋಟೆಯಲ್ಲಿ ಚಾರಣ ಏರ್ಪಡಿಸಿತ್ತು. ಆ ಚಾರಣದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆತಿದ್ದು ಆಕಸ್ಮಿಕವಾಗಿ. ಏಕೆಂದರೆ ಬುಧವಾರದವರೆಗೆ ನನಗೆ ಆ ಚಾರಣ ಕುರಿತಾಗಲೀ, ವಿಸ್ಮಯ ಪ್ರತಿಷ್ಠಾನದ ಕುರಿತಾಗಲೀ ಏನೂ ತಿಳಿದಿರಲಿಲ್ಲ. ಬ್ಲಾಗ್ ಒಂದರಿಂದ ವಿಷಯ ತಿಳಿದು ಸಂಬಂಧಪಟ್ಟವರಿಗೆ ಕರೆ ಮಾಡಿ ಚಾರಣ ಕುರಿತು ಮಾಹಿತಿ ಪಡೆದು ಅದರಲ್ಲಿ ನಾನು ಭಾಗಿಯಾಗಲು ಹೊರಟೆ.
ನನಗೆ ಇದು ಮೊದಲ ಚಾರಣ. ಚಾರಣಕ್ಕೆ ಮನೆಯವರನ್ನು ಒಪ್ಪಿಸುವುದೇ ನನಗೆ ದೊಡ್ಡ ತಲೆನೋವಾಯಿತು. ಅಮ್ಮನನ್ನು ಸುಲಭವಾಗಿ ಒಪ್ಪಿಸಿದೆನಾದರೂ ಅಪ್ಪನನ್ನು ಒಪ್ಪಿಸಲಾಗಲಿಲ್ಲ. ಬೇಕಿದ್ದರೆ ಧರ್ಮಸ್ಥಳಕ್ಕೆ ಹೋಗು ಎಂದರು ಅಪ್ಪ. ಅವರನ್ನು ಒಪ್ಪಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊನೆಗೂ ಅವರು ಎಲ್ಲ ವಿವರಗಳನ್ನು ಪಡೆದು ಗಂಟೆಗೊಮ್ಮೆ ಫೋನು ಮಾಡಬೇಕೆಂದು ಷರತ್ತು ಹಾಕಿ ಒಪ್ಪಿದರು. ನಾನು ಕಡೂರು ಬಿಟ್ಟಾಗ ಬೆಳಗ್ಗಿನ ಜಾವ ೪ ಗಂಟೆ. ಹುಣ್ಣಿಮೆ ಕಳೆದು ಆಗಷ್ಟೆ ಎರಡು ದಿನವಾಗಿತ್ತು. ಮೂಡಿಗೆರೆಗೆ ಹೋಗುತ್ತಿದ್ದದ್ದು, ತಲೆತುಂಬಾ ತೇಜಸ್ವಿಯವರು ತುಂಬಿಕೊಂಡಿದ್ದರಿಂದ ನಿದ್ದೆ ಬಂದಿರಲಿಲ್ಲ. ತಿರುವುಗಳು ತುಂಬಿದ ದಾರಿಯುದ್ದಕ್ಕೂ ಚಂದಿರ ಕಣ್ಣಾಮುಚ್ಚಾಲೆ ಆಡುತ್ತಿದ್ದ. ಕಿಟಕಿಯಾಚೆ ಒಮ್ಮೆ ಅತ್ತ ಸರಿದು ಕಣ್ಮರೆಯಾಗುತ್ತಿದ್ದರೆ, ಇನ್ನೊಮ್ಮೆ ಇತ್ತ ಬಂದು ದರ್ಶನ ನೀಡುತ್ತಿದ್ದ. ೭ ಗಂಟೆಗೆ ಮೂಡಿಗೆರೆ ತಲುಪಬೇಕಿದ್ದ ನಾನು ೬ ಗಂಟೆಗೇ ಅಲ್ಲಿ ಹಾಜರಿ ಹಾಕಿದ್ದೆ. ವಿವಿಧೆಡೆಗಳಿಂದ ಚಾರಣಪ್ರಿಯರು, ಆಸಕ್ತರು, ಪ್ರಕೃತಿಪ್ರಿಯರು ಅಲ್ಲಿಗೆ ಬಂದಿದ್ದರು. ದೂರದೂರುಗಳಿಂದ ಹಲವರು ಬರಬೇಕಿದ್ದರಿಂದ ಚಾರಣಕ್ಕೆ ಹೊರಡುವುದು ಸ್ವಲ್ಪ ತಡವಾಯಿತು. ಒಟ್ಟು ೪೬ ಜನರಿದ್ದ ನಮ್ಮ ತಂಡ ಮೂರು ಜೀಪುಗಳಲ್ಲಿ ಮೂಡಿಗೆರೆಯಿಂದ ಸುಮಾರು ೨೦ ಕಿ.ಮೀ ದೂರವಿದ್ದ ಕುಂದೂರಿಗೆ ಹೊರಟೆವು. ಅದು ನಮ್ಮ ಚಾರಣ ಶುರುವಾಗುವ ಸ್ಥಳ. ಅಲ್ಲಿ ಎಲ್ಲರೂ ತಿಂಡಿ ತಿಂದು ತಮ್ಮ-ತಮ್ಮ ಪರಿಚಯ ಮಾಡಿಕೊಂಡು ಮಧ್ಯಾಹ್ನದ ಊಟವನ್ನು ಕಟ್ಟಿಟ್ಟು ಬ್ಯಾಗನಲ್ಲಿರಿಸಿಕೊಂಡು ಹೊರಟೆವು.
ಮೂಡಿಗೆರೆಯೆಂದ ಕೂಡಲೇ ಕಣ್ಮುಂದೆ ಬರುವುದು ದಾರಿಯುದ್ದಕ್ಕೂ ಅಕ್ಕಪಕ್ಕದಲ್ಲಿ ಹಬ್ಬಿರುವ ಕಾಫಿ ತೋಟಗಳು. ಹೂಮಳೆಯ ನಿರೀಕ್ಷೆಯಲ್ಲಿದ್ದ ಕಾಫಿತೋಟಗಳು ನಮಗೆ ಮೊದಲು ಇದಿರಾದವು. ಅದರ ನಡುವೆ ನಡೆದು ನಾವು ಹತ್ತಬೇಕಿದ್ದ ಬೇಟರಾಯನಕೋಟೆಯ ಬುಡದವರೆಗೂ ಬಂದೆವು. ದಾರಿ ಸವೆಯುತ್ತ  ಹಲವರು ಪರಿಚಿತರಾದರು. ಹೀಗೆಯೇ ಪರಸ್ಪರ ಪರಿಚಯಿಸಿಕೊಳ್ಳುತ್ತಾ ಒಬ್ಬರ ಹಿಂದೆ ಒಬ್ಬರು ಸಣ್ಣ ಕಾಲುದಾರಿಯಲ್ಲಿ ಸಾಗುತ್ತಿರಬೇಕಾದರೆ ಅದೆಲ್ಲಿತ್ತೋ ಏನೋ? ನಮ್ಮ ನಡುವಿನಿಂದ ನವಿಲೊಂದು ಹಾರಿ ಹೋಯಿತು. ಎಲ್ಲರೂ ಅಲ್ಲಿ ಇಲ್ಲಿ ಎನ್ನುವಷ್ಟರಲ್ಲಿ ಕಾಡಿನಲ್ಲಿ ಮರೆಯಾಗಿ ಹೋಯಿತು. ಮೃಗಾಲಯದಲ್ಲಿ ಸರಳುಗಳ ನಡುವೆ ತನ್ನಷ್ಟಕ್ಕೆ ತಾನಿದ್ದುಕೊಂಡು ಹೋಗಿಬರುವವರಿಗೆಲ್ಲಾ ಫೋಸು ಕೊಡುತ್ತಿದ್ದ ನವಿಲು ಈ ಕಾಡಿನ ಮೌನವನ್ನು ಸೀಳಿ ನಮ್ಮ ನಡುವಿನಿಂದಲೇ ಹಾರಿ ಮರೆಯಾದಾಗ ಉಂಟಾದ ರೋಮಾಂಚನ ಅಷ್ಟಿಷ್ಟಲ್ಲ. ನವಿಲು ಅಷ್ಟು ದೂರ ಹಾರಬಹುದೆಂದು ನಾನಂತೂ ಊಹಿಸಿರಲಿಲ್ಲ. ಗಂಡು ನವಿಲು ಕುಣಿಯುವ ನವಿಲಾದ್ದರಿಂದ ಅದು
ಹೆಣ್ಣು ನವಿಲೇ ಇರಬೇಕೆಂದು ನಮ್ಮ ಜೊತೆ ಬಂದಿದ್ದವರೊಬ್ಬರು ತಿಳಿಸಿದರು. ಅಲ್ಲಿಂದ ಹಾಗೆಯೇ ನಡೆಯುತ್ತಿರಬೇಕಾದರೆ ಝರಿಯೊಂದರ ಮೂಲವಿರಬಹುದಾದ ಮರಗಳ ಬೇರುಗಳು ತುಂಬಿಕೊಂಡಿದ್ದ ಸಣ್ಣ ಬಿಲದಂತಹ ಸ್ಥಳದಿಂದ ಸಣ್ಣಗೆ ನೀರು ತೊಟ್ಟಿಕ್ಕುತ್ತಿತ್ತು. ತೇಜಸ್ವಿಯವರು ಹುಡುಕಿದ್ದ ಝರಿಯ ಮೂಲ ಇದೇ ತೆರನದ್ದಾಗಿರಬಹುದೆಂದು ಊಹಿಸಿದೆ. (ನನ್ನ ಹಿಂದಿನ ಪೋಸ್ಟ್ ನೋಡಿ). ಸ್ವಲ್ಪ ಮುಂದೆ ನಡೆದು ಅಲ್ಲಿಯೇ ಇದ್ದ ಬಯಲಿನಂತಹ ಪ್ರದೇಶದಲ್ಲಿ ಸ್ವಲ್ಪ ಹೊತ್ತು ನಿಂತೆವು. ಆಗಲೇ ಅರ್ಧದಷ್ಟು ಬೆಟ್ಟ ಹತ್ತಿದ್ದರಿಂದ ಸುತ್ತಲ ಪಶ್ಚಿಮಘಟ್ಟದ ಪರ್ವತಶ್ರೇಣಿಗಳು ಕಾಣಿಸಿ ಕ್ಯಾಮರಾಗಳಿಗೆ ರೂಪದರ್ಶಿಗಳಾಗಿದ್ದವು.
ನಾವು ಹತ್ತಬೇಕಿರುವ ಪರ್ವತ ನಾವು ನಡೆಯುತ್ತಿದ್ದ ದಾರಿಯಲ್ಲಿ ನಮ್ಮ ಹಿಂದೆ ಬಂದು ನನಗೆ ಗೊಂದಲವನ್ನುಂಟು ಮಾಡಿದವು. ನಾವು ಹತ್ತಬೇಕಿರುವುದು ಬೇರೆ ಯಾವುದೋ ಪರ್ವತವಿರಬೇಕೆಂದುಕೊಂಡೆ. ಅಲ್ಲಿಯೇ ಒಬ್ಬರನ್ನು ವಿಚಾರಿಸಿದಾಗ ನನ್ನ ಊಹೆ ಸುಳ್ಳಾಯಿತು. ಬೆಟ್ಟವ
ನ್ನು ಸುತ್ತಿಕೊಂಡು ಹತ್ತುತ್ತಿದುದ್ದರಿಂದ ಆ ರೀತಿ ನನಗೆ ಅನಿಸಿತ್ತು. ನಮ್ಮ ಜೊತೆ ದಾರಿ ತೋರಿಸಲು ಅಲ್ಲಿನ ಸ್ಥಳೀಯರು ಚಂದ್ರಯ್ಯ, ಮಲ್ಲಯ್ಯ ಎನ್ನುವವರು ಬಂದಿದ್ದರು. ಒಬ್ಬರು ಮುಂದೆ ದಾರಿ ತೋರಿಸುತ್ತಾ ಹೋದರೆ, ಇನ್ನೊಬ್ಬರು ಕೊನೆಯಲ್ಲಿದ್ದುಕೊಂಡು ಯಾರೂ ಕೂಡ ದಾರಿತಪ್ಪದಂತೆ ನಿಗಾ ವಹಿಸಿದ್ದರು. ಅವರು ಕರೆದುಕೊಂಡ ದಾರಿ ಸುತ್ತುಬಳಸಿ ಎನಿಸಿದರೂ ಒಂದಿನಿತು ಸುಸ್ತಾಗಲಿಲ್ಲ. ನಾವೇ ದಾರಿಯನ್ನು ಮಾಡಿಕೊಂಡು ಹೊರಟಿದ್ದರೆ ಅರ್ಧ ಹತ್ತುವಷ್ಟರಲ್ಲಿ ಸುಸ್ತಾಗಿ ಕುಳಿತುಕೊಳ್ಳಬೇಕಿತ್ತು. ಆದರೆ ಶುರುವಿನಲ್ಲಿ ಶಿಖರ ನೋಡಿ ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದಿದ್ದವರು ಕೂಡ  ಏನೂ ಮಾತನಾಡದೆ ಆರಾಮಾಗಿಯೇ ಹತ್ತಿದ್ದರು.
ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿ, ನಮಗೆಂದೇ ಜೀವಾಳರವರು ತಂದಿದ್ದ ಕಾಡುಜಾತಿಯ ಹಣ್ಣೊಂದನ್ನು ಚಪ್ಪರಿಸಿ ಆ ಬಯಲಿನಂತಹ ಪ್ರದೇಶದಿಂದ ಹೊರಟೆವು. ಸ್ವಲ್ಪ ಮೇಲೆ ಹತ್ತಿದಾಗ ನಮ್ಮ ಜೊತೆ ಬಂದಿದ್ದವರೊಬ್ಬರು ಮರವೊಂದರ ತೊಗಟೆಯಿಂದ ವಿಚಿತ್ರ ಕೀಟವೊಂದನ್ನು ತೆಗೆದು ತೋರಿಸಿದರು. ನೋಡಲು ಥೇಟ್ ಕಡ್ಡಿಯಂತೆಯೇ ಇದ್ದ ಆ ಕೀಟವನ್ನು ಅದು ಹೇಗೆ  ಗುರುತಿಸಿದ್ದರೋ ನನಗಂತೂ ಗೊತ್ತಿಲ್ಲ. ಆ ಕೀಟವನ್ನು ಕೈಯಲ್ಲಿ ಹಿಡಿದುಕೊಂಡು ತೋರಿಸುತ್ತಾ ಅದರ ಅಂಗರಚನೆಯನ್ನು ವಿವರಿಸಿದರು. ಜೀವಿಗಳು ಪ್ರಕೃತಿಯೊಡನೆ ನಿರಂತರವಾಗಿ ನಡೆಸಿಕೊಂಡು ಬಂದಿರುವ ಹೊಂದಾಣಿಕೆಯನ್ನು ನೋಡಿ ಸೋಜಿಗವಾಯಿತು. ಇಂತಹ ಕೀಟಗಳು ನಮ್ಮ ನಡುವೆಯೇ ಸಾಕಷ್ಟು ಇರಬಹುದಾದರೂ ಅದನ್ನು ನೋಡಿ ಗುರುತಿಸಿ ಅದರ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಎಷ್ಟನ್ನು ಇದೇ ರೀತಿ ನಾವು ಕಣ್ಣಿಗೆ ಕಂಡರೂ ನೋಡದೇ ಬಿಟ್ಟಿದ್ದೇವೋ ಏನೋ..?
ತುದಿ ತಲುಪಿ ನೋಡಿದಾಗ ಸುತ್ತಲೂ ಅಲೆಅಲೆಗಳಂತೆ ದಿಗಂತದವರೆಗೂ ಹಬ್ಬಿ ಹಸಿರುಹೊದ್ದು ನಿಂತಿರುವ ಪರ್ವತ ಸಾಲುಗಳು. ಮತ್ತೆ ಒಂದಷ್ಟು ಫೋಟೋಗಳು. ನಮ್ಮ ಜೊತೆ ಬಂದಿದ್ದ ಹಿರಿಯರು ತಾವು ಈ ಮುಂಚೆ ಚಾರಣ ಮಾಡಿದ್ದ ಪರ್ವತಗಳನ್ನು ಅಲ್ಲಿಂದಲೇ ತೋರಿಸಿ ಉಳಿದಿರುವುದನ್ನು ಲೆಕ್ಕ ಹಾಕಿ ಆದಷ್ಟು ಬೇಗ ಅವುಗಳನ್ನು ಏರಬೇಕೆಂದುಕೊಳ್ಳುತ್ತಿದ್ದರು. ಅವರ ಉತ್ಸಾಹಕ್ಕೊಂದು ಸಲಾಂ. ಅಲ್ಲಿಂದ ಮಾತುಗಳು ತಮ್ಮ ಹಿಂದಿನ ನೆನಪುಗಳು, ಬದಲಾದ ಕಾಲಮಾನ, ವ್ಯವಸ್ಥೆಯಲ್ಲಿನ ದೋಷ,ಅವುಗಳೆಡೆಗಿನ ಆಕ್ರೋಶ, ಮುಂದಿನ ಯೋಜನೆಗಳತ್ತ ಹೊರಳುತ್ತಿತ್ತು. ಆಗಲೇ ಊಟದ ಸಮಯವಾಗಿದ್ದರಿಂದ ಬೇರೆ ದಾರಿಯಲ್ಲಿ ಇಳಿಯುತ್ತ ನೀರು
ಇರುವಂತಹ ಜಾಗಕ್ಕೆ ಬಂದು ಕುಳಿತೆವು. ಸುತ್ತಲೂ ಬೇರೆ ಯಾವುದು ನೀರಿನ ಮೂಲ ಇರಲಿಲ್ಲವೆಂದೇನೋ ಅಲ್ಲಿಗೆ ಸಾಕಷ್ಟು ಪ್ರಾಣಿಗಳು ಬಂದಿದ್ದರಿಂದ ಅವುಗಳ ಹೆಜ್ಜೆಗುರುತುಗಳಿದ್ದವು. ಕಟ್ಟಿಕೊಂಡು ಬಂದಿದ್ದ ಪಲಾವ್, ಮೊಸರನ್ನ ತಿಂದು ಒಂದಷ್ಟು ಕಾಲ ಹರಟಿ ಅಲ್ಲಿಂದ ಹೊರಟೆವು. ದಾರಿಯುದ್ದಕ್ಕೂ ಬ್ಲಾಗ್‍ಗಳ ಬಗ್ಗೆ, ನಾಟಕಗಳ ಬಗ್ಗೆ, ಒಂದಷ್ಟು ಸಿನಿಮಾಗಳ ಬಗ್ಗೆ ಚರ್ಚೆ ನಡೆಯಿತು. ಸುಮ್ಮನೆ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತ ನಡೆದು ಬಂದೆ. ಕಾಫಿ ತೋಟದ ಅಂಚಿಗೆ ಜೀಪುಗಳು ಬಂದು ಅಲ್ಲಿಂದ ನಮ್ಮನ್ನು ಕರೆದುಕೊಂಡು ಹೊರಟಿತು. ಅಲ್ಲಿಂದ ಕಾಫಿ ಕಾರ್ನರ್‍‍ಗೆ ತೆರಳಿ ಕಾಫಿ ಹೀರಿ ಮೂಡಿಗೆರೆಗೊಂದಷ್ಟು ಜನ, ಕೊಟ್ಟಿಗೆಹಾರಕ್ಕೊಂದಷ್ಟು ತೆರಳಿ ತಮ್ಮ ತಮ್ಮ ಊರುಗಳಿಗೆ ಹೊರಟರು.
ಮೂಡಿಗೆರೆಯಲ್ಲಿ ಬಸ್ಸು ಹತ್ತಿ ವಾಪಾಸ್ ಬರುತ್ತಿದ್ದಾಗ ಚಾರಣದ ಸಮಯದಲ್ಲಿ ಜೀವಾಳರವರು ಆಡಿದ್ದ ಮಾತುಗಳು ನೆನಪಿಗೆ ಬಂದವು. "ಈ ಇಡೀ ಜಗತ್ತಿನಲ್ಲಿ ನಾವು ಈಗ ಇರುವ ಜಾಗ ಒಂದು ಸಣ್ಣ ಚುಕ್ಕಿಯಷ್ಟಿರಬಹುದು. ಈ ಸಣ್ಣ ಚುಕ್ಕಿಯೇ ಇಷ್ಟೊಂದು ಅಚ್ಚರಿಯನ್ನು, ವಿಸ್ಮಯವನ್ನು ಮೂಡಿಸಬಹುದಾದರೆ ಇರಬಹುದಾದರೆ ಇನ್ನು ಇಡೀ ಭೂಮಿ, ಅದರಾಚೆಗಿನ ಬ್ರಹ್ಮಾಂಡ ಇನ್ನೇನೇನನ್ನೂ ತನ್ನೊಳಗೆ ಅಡಗಿಸಿಕೊಂಡಿರಬಹುದು."  ಸುಮ್ಮನೆ ಯೋಚಿಸುತ್ತಾ ಕುಳಿತೆ. 

Sunday, February 24, 2013

ಚಂದದ ಕನಸಿನಲ್ಲಿ ಪೂರ್ಣಚಂದ್ರ ತೇಜಸ್ವಿ


ಸಂಜೆ ಏಳರ ಸಮಯ. ಆಗಷ್ಟೇ ಸಂಜೆಯ ಕೆಂಪು ಕರಗಿ ನಿಧಾನವಾಗಿ ಕತ್ತಲು ಆವರಿಸುತ್ತಿತ್ತು. ಮನೆ ಸೇರುವ ಧಾವಂತದಲ್ಲಿ ಕೆಲವರು ಹೆಜ್ಜೆಯಿಡುತ್ತಿದ್ದರೆ, ಇನ್ನೊಂದಿಷ್ಟು ಜನ ತಮ್ಮ ಎಂದಿನ ವಾಕ್ ಮುಗಿಸಿ ರಾಜಕೀಯ, ಸಂಸಾರ ತಾಪತ್ರಯ ಅದು ಇದು ಎಂದು ಮಾತಾಡಿಕೊಳ್ಳುತ್ತ ನಿಧಾನವಾಗಿ ಸಾಗುತ್ತಿದ್ದರು. ಎಂದಿನಂತೆ ಅವಳ ಜೊತೆ ಮಾತು ಮುಗಿಸಿ ಮನೆ ಕಡೆ ಹೊರಟೆ.
ಬಾನಂಗಳದಲ್ಲಿ ಆಗಲೇ ಚಂದಿರ ಮೂಡಿದ್ದ. ಕರೆಂಟ್ ಇಲ್ಲದಿದ್ದುದ್ದರಿಂದ ಹಾಲು ಚೆಲ್ಲಿದಂತೆ ಬೆಳದಿಂಗಳು ಚೆಲ್ಲಿತ್ತು. ನಮ್ಮ ಮನೆಯ ಜಗುಲಿಯಲ್ಲಿ ಚಿಕ್ಕಚಿಕ್ಕ ಮಕ್ಕಳ ದಂಡೆ ನೆರೆದಿತ್ತು. ಅಲ್ಲೇ ಪಕ್ಕದಲ್ಲಿ ನನ್ನ ತಮ್ಮನೂ ಇದ್ದ. ನಮ್ಮ ತಾತ ಇವರೆಲ್ಲರನ್ನೂ ಕೂರಿಸಿಕೊಂಡು ಯಾವುದಾದರೊಂದು ದೇವರ ಕತೆಯನ್ನು ಹೇಳುತ್ತಿರಬೇಕೆಂದುಕೊಂಡೆ. ಹತ್ತಿರ ಹೋದೆ. ನೋಡಿದರೆ ಅಲ್ಲಿ ಕುಳಿತಿದ್ದವರು ನಮ್ಮ ತಾತನವರಲ್ಲ. ನರೆತ ಗಡ್ಡದ, ದುಂಡು ಮುಖದ ಆ ವ್ಯಕ್ತಿ, ತಮ್ಮ ಮಾತಿನಿಂದ ಸುತ್ತಲು ಕುಳಿತಿದ್ದ ಮಕ್ಕಳೆಲ್ಲರನ್ನು ಮಂತ್ರಮುಗ್ಧರನ್ನಾಗಿಸಿದ್ದರು. ಅಲ್ಲಿ ಕುಳಿತಿದ್ದವರು ಪೂರ್ಣಚಂದ್ರ ತೇಜಸ್ವಿ ! ತಮ್ಮ ಎಂದಿನ ವಿನೋದಭರಿತ ಶೈಲಿಯಲ್ಲಿ ಪರಿಸರದ ವಿಸ್ಮಯಗಳನ್ನು, ಜೀವಜಗತ್ತಿನ ವೈವಿಧ್ಯಗಳನ್ನು, ನಾವೆಂದೂ ಗಮನಿಸಿರದ ನಮ್ಮ ಸುತ್ತಲೇ ನಡೆಯುವ ಅದ್ಭುತ ಎನಿಸುವ ಸೂಕ್ಷ್ಮ ವಿವರಗಳನ್ನು ತಿಳಿಸುತ್ತಿದ್ದರು. ಈಗಷ್ಟೇ ಅವರ ಪುಸ್ತಕಗಳ ಮೂಲಕ ಅವರ ಪರಿಚಯ ಮಾಡಿಕೊಳ್ಳುತ್ತಿರುವ ನನಗೆ ಅವರನ್ನು ಕಂಡ ತಕ್ಷಣ ಮೈಯಲ್ಲಿ ಮಿಂಚು ಹರಿದಂತಾಯ್ತು. ಸದ್ದು ಮಾಡದೆ ಅವರ ಬಳಿ ಹೋಗಿ ಕುಳಿತೆ. ಅವರು ತಾವು ಝರಿಯೊಂದರ ಮೂಲ ಹುಡುಕಿಕೊಂಡು ಹೋಗಿದ್ದರ ಬಗ್ಗೆ ಹೇಳುತ್ತಿದ್ದರು.
ತೇಜಸ್ವಿಯವರ ತೋಟದಲ್ಲಿ ಒಂದು ಚಿಕ್ಕ ಝರಿ ಹರಿಯುತ್ತಿತ್ತು. ಆ ಝರಿಯೇ ಅವರ ಮನೆಯ ನೀರಿನ ಮೂಲ. ಬಟ್ಟಬೇಸಿಗೆಯಲ್ಲಿಯೂ ಬೇರೆಲ್ಲಾ ಕಡೆ ನೀರಿಗೆ ಹಾಹಾಕಾರವಿದ್ದರೂ ಆ ಝರಿ ಮಾತ್ರ ಹರಿಯುತ್ತಿದ್ದುದರಿಂದ ತೇಜಸ್ವಿಯವರಿಗೆ ಆ ಝರಿಯ ಬಗ್ಗೆ ಕುತೂಹಲ. ಅದರ ನೀರಿನ ಪ್ರಮಾಣ ಅಳೆಯಲು ಅದಕ್ಕೊಂದು ಅಡ್ಡಗಟ್ಟೆ ಕಟ್ಟಿ ಪೈಪ್ ಮೂಲಕ  ನೀರು ಹಾಯಿಸಿ ಸಂಗ್ರಹಿಸಿದರು. ಅದರಲ್ಲಿ ಒಂದು ನಿಮಿಷಕ್ಕೆ ಮೂವತ್ತು ಲೀಟರ್ ಅಂದರೆ ದಿನಕ್ಕೆ ಸುಮಾರು ೪೩,೦೦೦ ಲೀ. ನೀರು ಹರಿಯುತ್ತಿತ್ತು. ಅವರಿಗೆ ಈ ನೀರಿನ ಮೂಲ ಹುಡುಕಬೇಕೆನಿಸಿ ಅದರ ಪಾತ್ರದಲ್ಲಿ ನಡೆಯುತ್ತ ಹೋದರಂತೆ. ಮೇಲೆ ಹೋಗುತ್ತ ಹೋಗುತ್ತ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ಅವರ ಅರಿವಿಗೆ ಬಂತು. ಹಾಗೆಯೇ ನಡೆಯುತ್ತ ಕೊರಕೊಲಿನೊಳಕ್ಕೆ ಹೊಕ್ಕರು. ಅಲ್ಲಿ ಬಿದ್ದಿದ್ದ ತರಗೆಲೆಗಳ ಹಾಸಿನೊಳಗೆ  ಹಳ್ಳ ಎಲ್ಲಿದೆ ಎನ್ನುವುದು ಅವರ ಅರಿವಿಗೆ ಬರದೆ ಹಾಗೆಯೇ ಸುತ್ತಲೂ ನೋಡುತ್ತ ನಿಂತರಂತೆ. ಅಲ್ಲೊಂದು ಚಿಕ್ಕ ಗುಹೆ ಅವರ ಕಣ್ಣಿಗೆ ಬಿತ್ತು. ಆ ಗುಹೆಯ ಅಕ್ಕಪಕ್ಕಗಳಲ್ಲಿ ಫರ್ನ್‍ಗಳ, ಮರಗಳ, ಬೇರುಗಳು ಹೊರಚಾಚಿದ್ದವು. ಮೆಲ್ಲಗೆ ಅವುಗಳಿಂದ ನೀರು ಹನಿದು ಬೀಳುತ್ತಿತ್ತು. ಹನಿಯಾಗಿ ಬಿದ್ದ ನೀರು ನಿಧಾನವಾಗಿ ಹರಿಯಲಾರಂಭಿಸಿ ಝರಿಯಾಗಿತ್ತು. ದಿನಕ್ಕೆ ೪೩,೦೦೦ ಲೀ. ನೀರು ಹರಿಯುವ ಝರಿಯ ನೀರಿನ ಮೂಲ ಇದೇ ? ಎಂದುಕೊಂಡು ಆಶರ್ಯಪಡುತ್ತ ಇಳಿದು ಬರುತ್ತಿರಬೇಕಾದರೆ ದಂಡೆಯಲ್ಲಿ ಅನೇಕ ಕಡೆ ಗುಹೆಯಲ್ಲಿ ಕಂಡಂತೆಯೇ ನೀರು ತೊಟ್ಟಿಕ್ಕುತ್ತಿರುವುದನ್ನು ಕಂಡರು. ನಡೆದಂತೆ ನೀರಿನ ಪ್ರಮಾಣ ಹೆಚ್ಚುತ್ತ ದಿನಕ್ಕೆ ನಲ್ವತ್ಮೂರು ಸಾವಿರ ಲೀ. ಹರಿಯುವಷ್ಟು ಆಗಿತ್ತು. ಎಲ್ಲೋ ಒಂದು ಕಡೆ ಹುಟ್ಟುವ ನದಿಗೆ ಇಂತಹ ಸಹಸ್ರಾರು ಝರಿಗಳು ಕೂಡಿಕೊಂಡು  ರಭಸವಾಗಿ ಹರಿಯುತ್ತ ಸಮುದ್ರ ಸೇರುತ್ತದೆ ಎಂದರು. ಗುಡ್ಡದ ಯಾವುದೋ ಮೂಲೆಯಲ್ಲಿ ನೀರು ಜಿನುಗಿ, ಒಂದೆಡೆ ಕೂಡಿ ಹರಿದು ಝರಿಯಾಗಿ ಹರಿಯುವುದನ್ನು ವಿವರಿಸುವಾಗ ಅವರ ಕಣ್ಣುಗಳಲ್ಲಿ ಒಂದು ವಿಶಿಷ್ಠ ಹೊಳಪಿತ್ತು, ಪ್ರಕೃತಿಯನ್ನು ಪರಿಚಯಿಸಿಕೊಳ್ಳುವ ತವಕವಿತ್ತು, ವಿಸ್ಮಯವಿತ್ತು. ಆ ವಿಸ್ಮಯ ಅಲ್ಲಿದ್ದ ಮಕ್ಕಳಲ್ಲಿ ತುಂಬಿಕೊಳ್ಳುತ್ತಿತ್ತು. ಅಲ್ಲಿಯವರೆಗೂ ರಾಜಕುಮಾರಿಯನ್ನು ಹುಡುಕಿಕೊಂಡು ಹೊರಟ ರಾಜಕುಮಾರನ ಕತೆಯನ್ನೋ, ಕಪ್ಪೆ ರಾಜಕುಮಾರನಾಗಿ ಬದಲಾದ ಕತೆಯನ್ನೋ, ತೊಂದರೆ ಮಾಡುತ್ತಿದ್ದ ರಾಕ್ಷಸರನ್ನು ದೇವರು ಅವತರಿಸಿ ಸಂಹರಿಸಿದ ಕತೆಯನ್ನೋ ಕೇಳಿದ್ದ ಮಕ್ಕಳಿಗೆ ಇದೊಂದು ವಿಶೇಷ ಅನುಭವ. ಇದೇ ಮೊದಲ ಬಾರಿಗೆ ತಮ್ಮ ಸುತ್ತಮುತ್ತಲೇ ನಡೆಯುತ್ತಿದ್ದ ವಿಸ್ಮಯಕಾರಿ ಘಟನಗಳಿಗೆ ಅವರು ಕಣ್ಣಾಗಿದ್ದರು.
ಅಲ್ಲಿದ್ದ ಎಲ್ಲಾ ಮಕ್ಕಳನ್ನು ಅವರ ವಿಧ್ಯಾಭ್ಯಾಸದ ಬಗ್ಗೆ ವಿಚಾರಿಸಿಕೊಂಡು ನನ್ನನ್ನು ಕರೆದರು. "ಏನು ಓದುತ್ತಿದ್ದೀಯಾ?" ಎಂದು ಕೇಳಿದರು. ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಮೂರನೇ ವರ್ಷ ಎಂದೆ. ಸುಮ್ಮನೆ " ನೀರು ಪಂಪ್ ಮಾಡುವುದು ಹೇಗೆ?" ಎಂದು ಕೇಳಿದರು. ಗೊತ್ತಿಲ್ಲವೆಂದೆ. "ಮೂರ್ಖ, useless fellow " ಎಂದು ಬೈದರು. ಅವರು ಕಾಡು ಕೊಂಡು ಮನೆ ಮಾಡಿದ ಹೊಸತರಲ್ಲಿ ನೀರಿನ ಅಗತ್ಯ ಹೆಚ್ಚಾದಾಗ ಝರಿಗೆ ಅಡ್ಡಕಟ್ಟೆ ಕಟ್ಟಿ, ಅದರ ಸಮೀಪ ಸ್ಕೂಟರ್ ನಿಲ್ಲಿಸಿ ಹಿಂದಿನ ಚಕ್ರಕ್ಕೆ ಅಳವಡಿಸಿದ್ದ ಒಂದು ಸಣ್ಣ ಪಂಪ್‍ನಿಂದ ಪೈಪ್ ಮೂಲಕ ನೀರು ಹರಿಸಿ ತೊಟ್ಟಿ ತುಂಬಿಸಿದ್ದನ್ನು ಹೇಳಿ ಮತ್ತಷ್ಟು ಬೈದು ಹೊರಟರು.
ಬೆಚ್ಚಿ ಬಿದ್ದವನಂತೆ ಎದ್ದಿದ್ದೆ! ನಂಬಲಿಕ್ಕಾಗುತ್ತಿಲ್ಲ! ಆಶ್ಚರ್ಯ ಮನದಲ್ಲಿ ಮನೆ ಮಾಡಿತ್ತು. ತೇಜಸ್ವಿಯವರು ನನ್ನ ಕನಸಿನಲ್ಲಿ ಬಂದಿದ್ದರು ! ಅಲ್ಲದೇ ಮಾತನಾಡಿಸಿ ಬೈದಿದ್ದರು! ಯಾವುದನ್ನೂ ಮರೆಯಬಾರದೆಂದು ತಕ್ಷಣ ಪೇಪರ್‌ನಲ್ಲಿ ಎಲ್ಲವನ್ನೂ ಬರೆದಿಟ್ಟುಕೊಂಡೆ. ತೇಜಸ್ವಿಯವರನ್ನು ಮಾತನಾಡಿಸಬೇಕೆಂದು, ಅವರ ಜೊತೆ ಕಾಲ ಕಳೆಯಬೇಕೆಂದು, ಅವರ ಹುಸಿಸಿಟ್ಟಿನ ಆದರೆ ಪ್ರೀತಿ ತುಂಬಿದ "ಮೂರ್ಖ, useless fellow " ಎಂಬ ಬೈಗುಳಗಳನ್ನು ಪ್ರಸಾದವೆಂದು ಸ್ವೀಕರಿಸಲು ಸಿದ್ಧರಿರುವವರ ದೊಡ್ಡ ಗುಂಪೇ ಕರ್ನಾಟಕದಲ್ಲಿ ಇತ್ತು. ನನಗೆ ಅವರು ಪರಿಚಿತರಾಗುವಷ್ಟರಲ್ಲಿ ಅವರು ಕಾಲವಾಗಿದ್ದರು. ಅವರ ಕೃತಿಗಳ ಮೂಲಕ, ಅವರ ಬಗೆಗಿನ ಕೃತಿಗಳ ಮೂಲಕ ಅವರನ್ನು ತಿಳಿದುಕೊಂಡಿದ್ದ ನನಗೆ ಅವರ ಬಗ್ಗೆ, ಅವರು ಬದುಕಿದ ರೀತಿಯ ಬಗ್ಗೆ ವಿಪರೀತ ಹೊಟ್ಟೆಕಿಚ್ಚು. ದೂರದ ಹಳ್ಳಿಯೊಂದರಲ್ಲಿ ಕುಳಿತು ತನ್ನ ಪಾಡಿಗೆ ತಾನು ಜೀವಿಸುತ್ತಾ ಸಾಹಿತ್ಯ, ಕೃಷಿ, ಫೋಟೋಗ್ರಫಿ, ಪಾಕಶಾಸ್ತ್ರ, ಪರಿಸರ ಚಳುವಳಿ, ಸಮಾಜವಾದಿ ಚಳುವಳಿ, ರೈತ ಹೋರಾಟ, ಕನ್ನಡ ಕಂಪ್ಯೂಟಿಂಗ್, ಜಾತಿ ವಿನಾಶ ಚಳುವಳಿ, ಶಿಕಾರಿ ಎಲ್ಲದರಲ್ಲೂ ಸೈ ಎನಿಸಿಕೊಂಡವರು ತೇಜಸ್ವಿಯವರು. ಯುವಕರಿಗೆ "ಅಚ್ಚರಿ", "ವಿಸ್ಮಯ", "ಅದ್ಭುತ" ಮುಂತಾದ ಪದಗಳನ್ನು ಕಲಿಸಿ ಆ ಮನೋಧರ್ಮವನ್ನು ರೂಪಿಸಿದವರು ತೇಜಸ್ವಿ. ಅವರನ್ನು ಕನಸಿನಲ್ಲಿ ಭೇಟಿಯಾದದ್ದು ನನ್ನ ಪಾಲಿಗೆ ಅಮೃತಘಳಿಗೆ.                                                                                                                                                 
ಯಾರ ಬಗ್ಗೆ ಜಾಸ್ತಿ ಯೋಚಿಸುತ್ತಿರುತ್ತೇವೇಯೋ ಅವರೇ ಕನಸಿನಲ್ಲಿ ಬರುತ್ತಾರೆ ಎಂದು ಚಿಕ್ಕಂದಿನಲ್ಲಿ ಕೇಳಿದ್ದೆ. ತೇಜಸ್ವಿಯವರನ್ನು ಇನ್ನಷ್ಟು ಕಾಣಲು ಅವರ ಪುಸ್ತಕಗಳನ್ನು ಓದುತ್ತಿದ್ದೆ, ನಿತ್ಯವೂ ಮಲಗುವಾಗ  ಅವರ ಬಗ್ಗೆಯೇ ಯೋಚಿಸುತ್ತಿದ್ದೆ, . ಅವರ ಜೊತೆ ಭದ್ರಾ ನದಿ ದಂಡೆಯಲ್ಲಿ ನಡೆಯುತ್ತಾ ಮೀನು ಹಿಡಿದಂತೆ, ಅವರ ಜೊತೆ ಕಾಡಿನಲ್ಲಿ ಅಲೆಯುತ್ತಿದ್ದಂತೆ, ಚಾರ್ಮಾಡಿ ಘಾಟಿನಲ್ಲಿ ಚಾರಣ ಮಾಡಿದಂತೆ, ಹಕ್ಕಿಗಳ ಫೋಟೋ ಸೆರೆ ಹಿಡಿಯಲು ಅವರು ಮಾಡಿದ್ದ ಅಡಗುತಾಣದಲ್ಲಿ ಅವರ ಜೊತೆ ಕುಳಿತಂತೆ, ಹೀಗೆ ಏನೇನೋ ನನ್ನಷ್ಟಕ್ಕೆ ನಾನು ಕಲ್ಪಿಸಿಕೊಳ್ಳುತ್ತಿದ್ದೆ.
ಸ್ವಲ್ಪ ದಿನಗಳ ನಂತರ ಮೊನ್ನೆ ಮತ್ತೆ ನನ್ನ ಕನಸಿನಲ್ಲಿ ಅವರು ಅವರ ಶ್ರೀಮತಿ ರಾಜೇಶ್ವರಿಯವರ ಜೊತೆ ಕಂಡಿದ್ದರು. ನಾನು ಅವಳ ಜೊತೆ ಯಾವುದೋ ಬೆಟ್ಟ ಹತ್ತಿ ಇಳಿದು ಅಲ್ಲಿಯೇ ಹರಿಯುತ್ತಿದ್ದ ನದಿಯೊಂದರ ಬಳಿ ಬಂದು ಕುಳಿತಿದ್ದೆನು. ಅವಳು ಹಾಗೆಯೇ ನದಿ ತೀರದಲ್ಲಿ ನಡೆದು ಬರುವುದಾಗಿ ಹೊರಟಳು. ಸಾಕಷ್ಟು ಜನ ಬೆಟ್ಟ ಹತ್ತಿ ಇಳಿದಿದ್ದವರು ಅಲ್ಲಿ ಕುಳಿತಿದ್ದರು. ಅಲ್ಲಿಯೇ ಬಂಡೆಯೊಂದರ ಮೇಲೆ ಮೀನು ಹಿಡಿಯಲು ಗಾಣ ಬೀಸಿ ತೇಜಸ್ವಿಯವರು, ರಾಜೇಶ್ವರಿಯವರೊಡನೆ ಕುಳಿತಿದ್ದರು. ಅವರನ್ನು ಕಂಡೊಡನೆಯೇ ಅವರನ್ನು ಮಾತನಾಡಿಸಲು, ಅವರದೊಂದು ಫೋಟೋ ತೆಗೆದುಕೊಳ್ಳಲು ಓಡಿದೆ. ದೂರದಿಂದಲೇ ಅವರ ಫೋಟೋ ಸೆರೆ ಹಿಡಿಯಲು ನೋಡಿದರೆ ನನ್ನ ಮೊಬೈಲ್‍ನಲ್ಲಿ ಕ್ಯಾಮರಾ ಇಲ್ಲ. ತಕ್ಷಣ ಅವಳತ್ತ ಓಡಿ ಅವಳ ಬಳಿ ಇದ್ದ ಡಿಜಿಟಲ್ ಕ್ಯಾಮರಾ ತೆಗೆದುಕೊಂಡು ಓಡಿ ಬಂದರೆ ಇಲ್ಲಿ ತೇಜಸ್ವಿಯವರಿಲ್ಲ. ಅವರನ್ನು ಕಂಡು ಮಾತನಾಡಿಸದಿದ್ದಕ್ಕೆ, ಒಂದು ಫೋಟೋ ಕೂಡ ತೆಗೆಯಲು ಆಗದಿದ್ದಕ್ಕೆ ಬೇಸರವಾಯಿತು.
ಈಗ ಮತ್ತೆ ಅವರ ಪುಸ್ತಕ ಹಿಡಿದು ಕುಳಿತಿದ್ದೇನೆ, ಮತ್ತೆ ಅವರ ಜೊತೆ ನದಿತೀರದಲ್ಲಿ ನಡೆದಂತೆ, ಕಾಡು ತಿರುಗಿದಂತೆ, ಚಾರಣ ಮಾಡಿದಂತೆ. ಮತ್ತೊಂದು ಕನಸಿನ ನಿರೀಕ್ಷೆಯಲ್ಲಿ.


ಚಿತ್ರಕೃಪೆ: ಅಂತರ್ಜಾಲ ಮತ್ತು ಅವಧಿ